ಬೆಂಗಳೂರು: ನನ್ನ ಪಾಡಿಗೆ ನನ್ನನ್ನು ಬದುಕಲು ಬಿಡಿ. ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ. ಅದನ್ನೇ ಇಟ್ಟುಕೊಂಡು ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡಬೇಡಿ. ಒಂದೇ ಒಂದು ಕೇಸ್ ಅದನ್ನೆ ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಒಬ್ಬ ಸಾಮಾನ್ಯ ಮನುಷ್ಯ ನನಗೂ ಭಾವನೆಗಳಿವೆ. ನನಗೆ ಜೀವನ ಮಾಡೋಕೆ ಬಿಡಿ ಎಂದು ಬಿಟ್ ಕಾಯಿನ್ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಕೈ ಮುಗಿದು ಕೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಲಪಾಡ್, 2018 ರವರೆಗೆ ಶ್ರೀಕಿ ನಮ್ಮ ಸಂಪರ್ಕದಲ್ಲಿದ್ದ. ನನ್ನ ತಮ್ಮ ಉಮರ್ ಸ್ನೇಹಿತ ಮನಿಷ್ ಡಿ.ಕೆ. ಅಂತ ಅವನ ಸ್ನೇಹಿತ ಈ ಶ್ರೀಕಿ. ಫರ್ಜಿ ಕೆಫೆ ಗಲಾಟೆ ನಂತರ ಅವನಿಗೂ ನಮಗೂ ಸಂಪರ್ಕ ಇಲ್ಲ. ಆ ವರದಿಯಲ್ಲೂ ಅವನು ಅದನ್ನೆ ಹೇಳಿದ್ದಾನೆ. ಫರ್ಜಿ ಕೆಫೆಯ ಗಲಾಟೆಯಲ್ಲಿ ಬಾಟಲಿ ಎಸೆದಿದ್ದ ಎ3 ಆರೋಪಿ ಆತ. ಈಗ ನೂರಕ್ಕೆ ನೂರು ನಮ್ಮ ಸಂಪರ್ಕದಲ್ಲಿ ಇಲ್ಲ. ಈ ಹಿಂದೆ ಇದ್ದ ಒಂದು ಕೇಸ್ನಿಂದ ಹೊರಬಂದು ಈಗಷ್ಟೇ ಉತ್ತಮ ಕೆಲಸಗಳತ್ತ ಮುನ್ನುಗ್ಗುತ್ತಿದ್ದೇನೆ. ಇದೀಗ ಇನ್ನೊಂದು ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಿಹಾಕಲು ನೋಡುತ್ತಿದ್ದಾರೆ. ನನಗೂ ತಂದೆ, ತಾಯಿ ಅಜ್ಜ, ಅಜ್ಜಿ ಇದ್ದಾರೆ ಅವರಿಗೆ ಏನು ಅನ್ನಿಸಬಹುದು ಎಂದು ಗದ್ಗದಿತನಾಗಿ ಕೈ ಮುಗಿದ ನಲಪಾಡ್ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್
ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಬಿಜೆಪಿಯವರಿಗೂ, ನಮ್ಮ ಪಕ್ಷದವರಿಗೂ ಕೈ ಮುಗಿದು ಕೇಳುತ್ತೇನೆ. ನನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಯಾವಾಗೆಲ್ಲಾ ಒಳ್ಳೆಯದಾಗುತ್ತೆ ಅನ್ನಿಸುತ್ತೋ ಆಗೆಲ್ಲಾ ಹೀಗೆ ಆಗುತ್ತದೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಬೇಕಿದ್ದಾಗ ಹೀಗೆ ಆಯಿತು. ಈಗ ಮತ್ತೆ ಅಧ್ಯಕ್ಷ ಸ್ಥಾನ ಸಿಗುವಾಗ ಹೀಗಾಗುತ್ತಿದೆ. ಬಿಟ್ ಕಾಯಿನ್ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಇದನ್ನೂ ಓದಿ: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಪರಿಚಯ ಅಷ್ಟೇ: ಉಮರ್ ನಲಪಾಡ್
2018 ಗಲಾಟೆ ಆದ ನಂತರ ಯಾರು ಸಹ ನನ್ನನ್ನು ಸರಿಯಾಗಿ ನೋಡಲ್ಲ. ರಿಕ್ವೆಸ್ಟ್ ಮಾಡ್ಕೋತೀನಿ ನಾನು ಜನರ ಮಧ್ಯೆ ಕೆಲಸ ಮಾಡಬೇಕು ಯುವಕರನ್ನು ಕಟ್ಟಬೇಕು. ನನ್ನನ್ನು ಬದುಕಲು ಬಿಡಿ ನನಗೂ ಶ್ರೀಕಿಗೂ ಯಾವುದೇ ಸಂಬಂಧವಿಲ್ಲ. ಬಿಟ್ಕಾಯಿನ್ ಪ್ರಕರಣದಲ್ಲಿ ನನ್ನನ್ನು ಸುಮ್ಮನೆ ಎಳೆದು ತರಬೇಡಿ. ಈ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಿ ಹಾಕಲು ಕುತಂತ್ರ ನಡೆಯುತ್ತಿದೆ. ದಯವಿಟ್ಟು ನಾನು ಯಾವುದೇ ಬಿಟ್ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ