ವಿಜಯಪುರ: ನಾನು ಒಂದು ಕುಟುಂಬದಿಂದ ಬಂದಿದ್ದೇನೆ. ಪ್ರಧಾನಿ ಮೋದಿ ಹಾಗೂ ಯೋಗಿ ಕುಟುಂಬ ಇಲ್ಲದ ನಾಯಕರು. ಆದರೆ ಕುಟುಂಬ ರಾಜಕಾರಣ ಇರೋದೇ. ನಾನು ಮಾಡಿದ್ದೇನೆ, ಯಡ್ಡಿಯೂರಪ್ಪನೂ ಮಾಡಿದ್ದಾರೆ, ವಿಜಯೇಂದ್ರನೂ ಹಾಗೆ ಮಾಡ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿಯವರು ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ 80 ವರ್ಷ ವಯಸ್ಸಾಗಿದೆ. ಹೀಗಾಗಿ ಅವರು ಘೋಷಣೆ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರಿಗೆ ದುಡಿಯುವ ತಾಕತ್ತಿದೆ. ಅವರಿಗೆ ಕೆಲಸ ಮಾಡುವ ಹಂಬಲ ಇದೆ. ಆದರೆ 75 ಆದ ಮೇಲೆ ಬಿಜೆಪಿಯ ನಿಯಮಾನುಸಾರ ನಿವೃತ್ತಿ ಹೊಂದಬೇಕು. ಮಗನನ್ನು ಬೆಳೆಸಬೇಕು ಅನ್ನೋ ಉದ್ದೇಶದಿಂದ ಕ್ಷೇತ್ರವನ್ನ ಬಿಟ್ಟು ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಸಿಎಂ ಸೀಟಿಗಾಗಿ ಗುದ್ದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನಲ್ಲಿ ಸಿಎಂ ಸೀಟಿಗಾಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರೋದಿಲ್ಲ. ಸಿದ್ದರಾಮಯ್ಯನು ಸಿಎಂ ಆಗಲ್ಲ, ಡಿಕೆಶಿಯು ಸಿಎಂ ಆಗಲ್ಲ. ಇನ್ನೊಬ್ಬರು ಸಿಎಂ ಆಗಲು ಹಂಬಲಪಡ್ತಿದ್ದಾರೆ, ಪಡಲಿ. ಎಲೆಕ್ಷನ್ ಆಗೋವರೆಗೂ ಅವರು ಚಟ ತೀರಿಸಿಕೊಳ್ಳಲಿ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಒಳ್ಳೆಯ ಸರ್ಕಾರ ಕೊಟ್ಟಿದ್ದೇವೆ, ಮುಂದು ಕೊಡುತ್ತೇವೆ ಎಂದು ತಿಳಿಸಿದರು.
ಸಿಎಂ ದೆಹಲಿ ಭೇಟಿ ಹಾಗೂ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ನನಗೆ ಮಾಹಿತಿ ಇಲ್ಲ, ನಿಮಗೆ ಗೊತ್ತಿದ್ರೆ ಪ್ರತಿಕ್ರಿಯಿಸ್ತೀನಿ. ಯಾವುದೇ ಸಚಿವ ಸಂಪುಟ ವಿಸ್ತರಣೆ ಇಲ್ಲ. ಈಗಾಗಲೇ ಮಂತ್ರಿಮಂಡಲ ಸಮೃದ್ಧವಾಗಿದೆ. ಸಿಎಂ ಬೊಮ್ಮಾಯಿ ರಾಜ್ಯದ ಉದ್ದಗಲಕ್ಕೂ ಕಾರ್ಯಕ್ರಮ ರೂಪಿಸುವುದರ ಜೊತೆಗೆ ಒಳ್ಳೆ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಟಾಕಳೆ ವಿರುದ್ಧ ಕೈ ಕಾರ್ಯಕರ್ತೆ ಅತ್ಯಾಚಾರ ಆರೋಪ – ನವ್ಯಶ್ರೀ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಪೊಲೀಸ್
ಬಿಜೆಪಿ ಆಗಲಿ, ಯಾರೇ ಇರಲಿ. ಐದು ವರ್ಷಕ್ಕೊಮ್ಮೆ ಎಲೆಕ್ಷನ್ ಆಗಲೇಬೇಕು. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಉಮೇಶ್ ಕತ್ತಿ, ಬಿಜೆಪಿಯಲ್ಲಿ ದಲಿತ ಸಿಎಂ ಆಗ್ತಾರೆ ಅನ್ನೋ ಚಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿಯಲ್ಲಿ ಯಾರಾದರೂ ಸಿಎಂ ಆಗಬಹುದು. ಈಗ ಬೊಮ್ಮಾಯಿ ಆಗಿದ್ದಾರೆ, ಹಿಂದೆ ಯಡಿಯೂರಪ್ಪ ಇದ್ದರು. ದಲಿತ ಸಿಎಂ ಆಗಬಹುದು ಎಂದು ದಲಿತ ಸಿಎಂ ಬೆಂಬಲಿಸಿದರು.
ನನಗೂ ಸಿಎಂ ಆಗುವ ಹಂಬಲವಿದೆ. ಇನ್ನೂ 15 ವರ್ಷ ವೇಳೆ ಇದೆ. ಕಾದು ನೋಡೋಣ ಎಂದು ಹೇಳುವ ಮೂಲಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು. ಇದೇ ವೇಳೆ ವಿಜಯಪುರ ಜಿಲ್ಲೆ ಮತ್ತೆ ಬರದಿಂದ ಪರಿತಪಿಸುವುದು ಬೇಡ. ಉತ್ತಮ ಮಳೆ ಆಗಲಿ ಅಂತಾ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.