ತುಮಕೂರು: ಪ್ರಧಾನಿ ಮೋದಿ ವಿರುದ್ಧ ಯಾವತ್ತೂ ಏಕ ವಚನದಲ್ಲೇ ವಾಗ್ದಾಳಿ ನಡೆಸುತ್ತಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ತುಮಕೂರಿನಲ್ಲಿ ನಡೆದ ಜನ ಜಾಗೃತಿ ಅಭಿಯಾನದಲ್ಲಿ ಬಹುವಚನಕ್ಕೆ ಬದ್ಧರಾಗಿದ್ದರು.
ಸುಮಾರು 37 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ಅಪ್ಪಿತಪ್ಪಿಯೂ ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಸಂಬೋಧಿಸಿಲ್ಲ. ಮೋದಿಜೀ ಪ್ರಧಾನಿ ಮೋದಿ ಅವರು, ಮಾನ್ಯ ಮೋದಿ ಅವರು, ಮೋದಿ ಅವರು ಹೀಗೆ ತಮ್ಮ ಭಾಷಣದುದ್ದಕ್ಕೂ ಬಹುವಚನದಲ್ಲೇ ಗೌರವ ಕೊಟ್ಟು ಹೆಸರು ಉಲ್ಲೇಖಿಸುತ್ತಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರೈತರು ಸ್ಮಾರ್ಟ್ಫೋನ್ ಕೊಳ್ಳಲು 1500 ರೂ. ಆರ್ಥಿಕ ನೆರವು ಕೊಟ್ಟ ಸರ್ಕಾರ
37 ನಿಮಿಷಗಳ ಭಾಷಣದಲ್ಲಿ ಸುಮಾರು 22 ಬಾರಿ ಪ್ರಧಾನಿ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ಎಲ್ಲೂ ಏಕವಚನದಲ್ಲಿ ಪ್ರಸ್ತಾಪಿಸಿಲ್ಲ. ಕಳೆದ ತಿಂಗಳು ಗುಬ್ಬಿ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಬಂದಾಗ “ಆ ಮೋದಿ ಇದ್ದಾನಲ್ಲ” ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯರ ಈ ಹೇಳಿಕೆಗೆ ತೀವ್ರ ಆಕ್ರೋಶವ್ಯಕ್ತವಾಗಿತ್ತು. ಆದರೆ ಇಂದು ಎಲ್ಲಿಯೂ ಏಕವಚನದಲ್ಲಿ ಮಾತನಾಡಿಲ್ಲ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್
ಮೋದಿ ವಿರುದ್ದ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಸಿಳ್ಳೆ ಚಪ್ಪಾಳೆ ಜೋರಾಗಿ ಹೊಡೆಯುತ್ತಿದ್ದರು. ಆದರೆ ಇಂದು ಈ ಕಾರಣಕ್ಕೆ ಸಿಳ್ಳೆ ಚಪ್ಪಾಳೆ ಬಂದಿಲ್ಲ. ಭಾಷಣ ನಡುವೆ ಎಲ್ಲೂ ಪ್ರಧಾನಿ ವಿರುದ್ಧ ಏಕವಚನ ಪ್ರಯೋಗ ಆಗದಂತೆ ಸಿದ್ದರಾಮಯ್ಯ ಬಹಳ ಎಚ್ಚರದಿಂದ ಮಾತನಾಡಿದ್ದ ಮೂಡಿಸಿದ್ದಾರೆ.
ನಾನು ಹಳ್ಳಿಯಿಂದ ಬಂದವನು. ನಾನು ಮಾತಾಡೋದೇ ಹೀಗೆ ಎಂದು ತಮ್ಮ ಏಕವಚನ ಪ್ರಯೋಗವನ್ನು ಸಮರ್ಥಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಇಂದು ಸಂಪೂರ್ಣ ಬದಲಾಗಿದ್ದರು. ಸಿದ್ದರಾಮಯ್ಯ ಬಹುವಚನಕ್ಕೆ ಬದ್ಧರಾಗಿದ್ದನ್ನು ಕಂಡು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ಪ್ರಧಾನಿ ಮೋದಿಯವರಿಗೆ ಮಾತ್ರ ಅಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೀ, ಶೋಭಾ ಕರಂದ್ಲಾಜೆ ಜೀ ಎಂದು ಸಂಬೊಧಿಸಿ ಅಚ್ಚರಿ ಮೂಡಿಸಿದ್ದಾರೆ.