ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿದ ಬಳಿಕ ಟ್ವೀಟ್ ಮಾಡಿರುವ ಕಾಂಗ್ರೆಸ್ ಮೋದಿ ಅವರ 56 ಇಂಚಿನ ಎದೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಗಳ ಸರಮಾಲೆ ಎಸೆದಿರುವ ಕಾಂಗ್ರೆಸ್, ಕರ್ನಾಟಕದ ಜನತೆ ನಿಮ್ಮನ್ನು ಸಾಮಾಜಿಕ ಜಾಲತಾಣದ ಮೂಲಕ ಜ್ವಲಂತ ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಭ್ರಷ್ಟಾಚಾರ, ವೈಫಲ್ಯ, ಸುಳ್ಳು ಭರವಸೆಗಳು, ಯಾಮಾರಿಸುವ ತಂತ್ರಗಾರಿಕೆ, ಕರ್ನಾಟಕಕ್ಕೆ ಮಾಡಿದ ಮೋಸದ ಬಗ್ಗೆ ಪ್ರಶ್ನಿಸಿದ್ದಾರೆ. ಈ ಯಾವ ಪ್ರಶ್ನೆಗೂ ಉತ್ತರಿಸಲು ನಿಮ್ಮ 56 ಇಂಚಿನ ಎದೆ ಧೈರ್ಯ ನೀಡಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಪ್ರಧಾನಿ ಮಂತ್ರಿಯವರೇ ನಿಮಗೂ ಸತ್ಯಕ್ಕೂ ಹೊಂದಾಣಿಕೆ ಆಗೋದೇ ಇಲ್ಲವೆ? ನಿಮ್ಮ ಬಾಯಿಂದ ಸತ್ಯ ಮತ್ತು ವಾಸ್ತವತೆ ಹೊರಡುವುದೇ ಇಲ್ಲವೆ? ಸಿಎಂ ಕುಮಾರಸ್ವಾಮಿ ಅಸಹಾಯಕರಲ್ಲ ಸರ್ಕಾರವೂ ಅಸಹಾಯಕವಲ್ಲ. ಬಿಎಸ್ವೈ ಮತ್ತು ತಂಡ ಮಾತ್ರ ಅಸಹನೆ, ಅಸತ್ಯ, ಅಧರ್ಮದ ದಾರಿಯಲ್ಲಿದೆ. ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಬಗ್ಗೆ ಚಕಾರವೆತ್ತಲಿಲ್ಲವೇಕೆ? ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ಪಂಚಿಂಗ್ ಬ್ಯಾಗ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ರು. ರಾಜ್ಯ ಸರ್ಕಾರದ ನೇತಾರ ಯಾರು ಎಂಬುವುದು ಜನರಿಗೆ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಕಿರುಕುಳದಿಂದ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್ ಆಗಿದ್ದಾರೆಂದು ವ್ಯಂಗ್ಯ ಮಾತುಗಳಿಂದ ಸಮ್ಮಿಶ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಮಹಾಘಟ್ಬಂಧನ್ ಮೂಲಕ ರಾಜ್ಯದಲ್ಲಿ ನೀವು ಕಾಣುತ್ತಿರುವ ದುರ್ಬಲ ಸರ್ಕಾರವನ್ನು ಕೇಂದ್ರದಲ್ಲಿ ತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ನಿಮ್ಮ ಒಂದು ಮತ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ನಮ್ಮ ಸರ್ಕಾರ ಬಂದ ಮೇಲೆ ದೊಡ್ಡ ದೊಡ್ಡ ವ್ಯಕ್ತಿಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಬರ್ಟ್ ವಾದ್ರಾ ಪ್ರಕರಣದ ಮೂಲಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv