ಜೈಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿಕೊಂಡು ಬಿಜೆಪಿ ಪಕ್ಷದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಬದಲಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಕಿಡಿಕಾರಿದ್ದಾರೆ.
ಕಳೆದ ವರ್ಷ ಮನ್ವೇಂದ್ರ ಸಿಂಗ್ ಅವರು ಕಾಂಗ್ರೆಸ್ ಸೇರಿದ್ದು, ಸದ್ಯ ರಾಜಸ್ಥಾನದ ಬರ್ಮರ್ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಪುಲ್ವಾಮಾ ಉಗ್ರರ ದಾಳಿ, ಬಾಲಾಕೋಟ್ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನು ಇಟ್ಟುಕೊಂಡು ಮತ ಕೇಳುತ್ತಿರುವುದು ಬಿಜೆಪಿಯ ತತ್ವಗಳಿಗೆ ವಿರುದ್ಧವಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ಬದಲಿಸಿದ್ದಾರೆ. ಈಗ ಸಂಸ್ಕೃತಿ, ನಂಬಿಕೆ, ಯೋಚನೆ, ಆಚರಣೆ, ಪ್ರಮುಖವಾಗಿ ಮಾನವ ಸಂಬಂಧಗಳು ಹೀಗೆ ಎಲ್ಲ ವಿಚಾರಗಳಲ್ಲೂ ಬಿಜೆಪಿ ಬದಲಾಗಿದೆ ಎಂದು ಆರೋಪಿಸಿದರು.
ಜಸ್ವಂತ್ ಸಿಂಗ್ ಸೇರಿದಂತೆ 75 ವರ್ಷ ಮೀರಿರುವ ಕೆಲವು ಹಿರಿಯ ನಾಯಕರಿಗೆ ಬಿಜೆಪಿ ಲೋಕಸಮರಕ್ಕೆ ಟಿಕೆಟ್ ನೀಡಲು ನಿರಾಕರಿಸಿದೆ. ಬಿಜೆಪಿಯ ಮೂಲ ತತ್ವವನ್ನೇ ಈಗಿರುವ ನಾಯಕರು ಬದಲಿಸಿದ್ದಾರೆ. ದ್ವೇಷವನ್ನು ಬಿತ್ತುತ್ತಿರುವವರ ವಿರುದ್ಧ ನಾನು ನಿಲ್ಲುತ್ತೇನೆ, ಹೋರಾಟ ಮಾಡುತ್ತೇನೆ ಎಂದು ಮನ್ವೇಂದ್ರ ಸಿಂಗ್ ಹೇಳಿದರು.
ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲುವು ಸೋಲು ನಿರ್ಧಾರವಾಗುತ್ತದೆ ಎನ್ನುವುದನ್ನು ನಾನು ನಂಬಲ್ಲ. ರಾಜಕೀಯದಲ್ಲಿ ಪದೇ ಪದೇ ಅಲೆ ಏಳಲ್ಲ. ಹಾಗೆಯೇ ಯಾವಾಗಲೂ ಒಂದೇ ಸೂತ್ರ ಯಶಸ್ಸು ತಂದು ಕೊಡಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.