ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಮೊದಲು ಚಿತ್ರದುರ್ಗದ ಚಳ್ಳಕೆರೆ, ನಂತರ ಮೈಸೂರಿನಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಹಳೇ ಮೈಸೂರು ಭಾಗದ ಅಭ್ಯರ್ಥಿಗಳ ಪರ ಮೈಸೂರಲ್ಲಿ ಮೋದಿ ಮತಯಾಚನೆ ಮಾಡಲಿದ್ದಾರೆ.
ಒಂದು ವರ್ಷದೊಳಗೆ ಎರಡನೇ ಬಾರಿಗೆ ಚಿತ್ರದುರ್ಗಕ್ಕೆ ಪ್ರಧಾನಿ ಮೋದಿ ಆಗಮನ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಚಳ್ಳಕೆರೆ ವೃತ್ತದ ಬಳಿಯಿರುವ ಜಯದೇವ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಮೋದಿ ರ್ಯಾಲಿ ನಡೆಸಲಿದ್ದಾರೆ. ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಎ. ನಾರಾಯಣಸ್ವಾಮಿ, ದಾವಣಗೆರೆ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಹಾಗೂ ತುಮಕೂರು ಅಭ್ಯರ್ಥಿ ಬಸವರಾಜು ಪರ ಪ್ರಚಾರ ಮಾಡಲಿದ್ದಾರೆ.
2018 ಮೇ 6 ರಂದು ಚಿತ್ರದುರ್ಗಕ್ಕೆ ವಿಧಾನಸಭಾ ಚುನಾವಣೆಗೆ ಮತಯಾಚನೆ ಮಾಡಲು ಬಂದಿದ್ದರು. ಈಗ ಒಂದು ವರ್ಷ ತುಂಬುವುದರ ಒಳಗೆ ಮತ್ತೊಮ್ಮೆ ಅದೇ ಮೈದಾನಕ್ಕೆ ಮತಯಾಚನೆಗೆ ಬರುತ್ತಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವೇದಿಕೆಗೆ ಆಗಮಿಸಲಿರುವ ಮೋದಿ ಸುಮಾರು ಒಂದು ಗಂಟೆ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮೈಸೂರಿಗೆ ಪ್ರಯಾಣಿಸುತ್ತಾರೆ. ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.