ನವದೆಹಲಿ: ದೇಶದಲ್ಲಿಂದು ಇಬ್ಬಗೆಯ ರಾಜಕೀಯ ವ್ಯವಸ್ಥೆಯಿದೆ. ಒಂದು ಪರಿವಾರ ಭಕ್ತಿಯ ಪಕ್ಷವಾದರೆ ಮತ್ತೊಂದು ಪರಿವಾರ ರಾಷ್ಟ್ರಭಕ್ತಿಯ ಪಕ್ಷವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಪ್ರತಿ ಪಕ್ಷಗಳ ವಿರುದ್ಧ ಹರಿಹಾಯ್ದರು.
ಬಿಜೆಪಿ ಪಕ್ಷದ 42ನೇ ಸಂಸ್ಥಾಪನಾ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾರತಮ್ಯ ಮತ್ತು ಭ್ರಷ್ಟಾಚಾರ ವೋಟ್ ಬ್ಯಾಂಕ್ ರಾಜಕಾರಣದ ದುಷ್ಪರಿಣಾಮಗಳಾಗಿದ್ದು ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷಗಳು ಇದನ್ನು ಅಭ್ಯಾಸ ಮಾಡಿಕೊಂಡಿದ್ದವು. ಬಿಜೆಪಿ ಅವುಗಳಿಗೆ ಸವಾಲೊಡ್ಡಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಮಧ್ಯೆ ಸ್ಟಾರ್ಟ್ ಅಪ್ ದಂಗಲ್ – ತೆಲಂಗಾಣ ಜೊತೆ ಹೋಲಿಸಿದ ಡಿಕೆಶಿಗೆ ಸಿಎಂ ಕ್ಲಾಸ್
ಭಾರತದೇಶ ಇಂದು ಯಾವುದೇ ಒತ್ತಡ, ಬಲವಂತಕ್ಕೆ ಮಣಿಯುವ ಭಯವಿಲ್ಲದೆ ತನ್ನ ಹಿತಾಸಕ್ತಿ, ನಿಲುವನ್ನು ಜಗತ್ತಿನ ಎದುರು ದೃಢವಾಗಿ ತೋರಿಸುವ ದೇಶವಾಗಿ ಮಾರ್ಪಟ್ಟಿದೆ. ಇಡೀ ಜಗತ್ತು ಎರಡು ಪ್ರತಿಸ್ಪರ್ಧಿ ಬಣವಾಗಿ ರೂಪುಗೊಂಡಾಗಲೂ ಭಾರತವನ್ನು ಮಾನವೀಯ ನೆಲೆಗಟ್ಟಿನಲ್ಲೇ ನೋಡಿದೆ ಎಂದರು.
ಯಾವುದೇ ಪಕ್ಷ ಅಧಿಕಾರದಲಿದ್ದಾಗಲೂ, ಅದು ಜನರಿಗಾಗಿ, ದೇಶಕ್ಕಾಗಿ ಏನೂ ಮಾಡುವುದಿಲ್ಲ ಎಂದು ಜನರು ನಂಬಿದ್ದ ಕಾಲವೊಂದಿತ್ತು. ಆದರೆ ಈಗ ಆ ಅಭಿಪ್ರಾಯ ಬಿಜೆಪಿಯಿಂದ ಬದಲಾಗಿದೆ. ದೇಶ ಮುಂದುವರಿಯುತ್ತಿದೆ ಎಂದು ಪ್ರತಿ ನಾಗಕರಿನೂ ಹೇಳುವ ಕಾಲ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶವಿದೆ: ಮೊಯಿತ್ರಾ
ಪಕ್ಷದ ಕುರಿತು ಮಾತನಾಡುತ್ತಾ, ಬಿಜೆಪಿ ಪಾಲಿಗೆ ಈ ಬಾರಿಯ ಸಂಸ್ಥಾಪನಾ ದಿನ ತುಂಬ ಮಹತ್ವ ದಿನ. ನಾವು ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದೇವೆ. ಭಾರತ ಜಾಗತಿಕ ಮಟ್ಟದಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸಹೊಸ ಅವಕಾಶಗಳು ಭಾರತಕ್ಕೆ ನಿರಂತರವಾಗಿ ಲಭ್ಯವಾಗುತ್ತಿವೆ. ಹಾಗೆಯೇ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಅಷ್ಟೇ ಅಲ್ಲ, ಬರೋಬ್ಬರಿ ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100 ದಾಟಿದೆ ಈ ಕಾರಣಳು ಇಂದಿನ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಂದು ನವರಾತ್ರಿಯ 5ನೇ ದಿನ. ನಾವಿಂದು ಸ್ಕಂದ ಮಾತೆಯನ್ನು ಪೂಜಿಸುತ್ತೇವೆ. ಸ್ಕಂದ ಮಾತೆ ಕಮಲದ ಸಿಂಹಾಸನದ ಮೇಲೆ ಕುಳಿತು, ಕಮಲದ ಹೂವನ್ನು ಹಿಡಿದು ಕುಳಿತಿರುವ ದೇವತೆ. ಬಿಜೆಪಿಯ ಪ್ರತಿಯೊಬ್ಬ ಸದಸ್ಯ, ಕಾರ್ಯಕರ್ತನಿಗೂ ಆಶೀರ್ವದಿಸಿ, ಒಳ್ಳೆಯದನ್ನು ಮಾಡು ಎಂದು ನಾನು ಮಾತೆಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.