ಬೆಂಗಳೂರು: ತಮಗೆ ಬೇಕಾಗಿರುವವರ ಕೇಸ್ಗಳನ್ನು ಸಂಪುಟದಲ್ಲಿ ಇಟ್ಟು ತೆಗೆದು ಹಾಕುವ ಕೆಲಸ ಸರಿಯಲ್ಲ ಎಂದು ಪರಿಷತ್ ಸದಸ್ಯ ರವಿಕುಮಾರ್ (MLC Ravikumar) ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಹಿಂದೆ ಭಯೋತ್ಪಾದನೆ ರೀತಿಯ ಚಟುವಟಿಕೆ ಮಾಡಿರುವಂತವರ ಕೇಸ್ಗಳನ್ನು ಎಲ್ಲಾ ತೆಗೆದು ಹಾಕಿದ್ದರು. ತಮ್ಮ ವೋಟ್ ಬ್ಯಾಂಕ್ ರಕ್ಷಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ. ಏನೇ ತಪ್ಪು ಮಾಡಿದ್ದರೂ ತಮಗೆ ಬೇಕಾದವರ ಕೇಸ್ ತೆಗೆದು ಹಾಕುವುದನ್ನು ಬಿಜೆಪಿ ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ – 62 ಪ್ರಕರಣ ವಾಪಸ್ಗೆ ಡಿಕೆಶಿ ಸಮರ್ಥನೆ
ಮತ ಪತ್ರದ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಿದ ವಿಚಾರವಾಗಿ, ನಿಮ್ಮ ಸರ್ಕಾರವೇ ಇವಿಎಂ ಮೂಲಕ ಅಧಿಕಾರಕ್ಕೆ ಬಂದಿದೆ. ಇವಿಎಂನಲ್ಲಿ ಏನೂ ಅಕ್ರಮ ಸಾಧ್ಯವಿಲ್ಲ ಎಂದು ಅನೇಕ ಕೋರ್ಟ್ ತೀರ್ಪು ಬಂದಿದೆ. ರಾಜ್ಯ ಸರ್ಕಾರ ಮತ್ತೆ ಪುರಾತನ ಯುಗಕ್ಕೆ ಹೋಗುತ್ತಿದೆ. ರಾಹುಲ್ ಗಾಂಧಿ ಹೇಳಿದರು ಎಂದು ಮತ ಪತ್ರ ತೆಗೆದುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ನಾವು ಜನರ ಬಳಿ ಹೋಗುತ್ತಿದ್ದೇವೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ರೀತಿ ಸರ್ಕಾರ ಏನೇನೋ ತಪ್ಪು ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ವ್ಯವಸ್ಥಿತವಾಗಿ ದೇಸಾಯಿ ಆಯೋಗದ ವರದಿಯಲ್ಲಿ ಸಿದ್ದರಾಮಯ್ಯ (Siddaramaiah) ಅವರಿಗೆ ಕ್ಲೀನ್ ಚಿಟ್ ಕೊಡಲು ಷಡ್ಯಂತ್ರ ಮಾಡಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡಿರುವುದು ನೂರಕ್ಕೆ ನೂರು ಸತ್ಯ. ಕ್ಲೀನ್ ಚಿಟ್ ಕೊಡುವಲ್ಲಿ ಸಾಕಷ್ಟು ನೀರು ಹರಿಸಿದ್ದಾರೆ. ತಾವೇ ನೇಮಿಸಿದ ಸಮಿತಿಯಿಂದ ಕ್ಲೀನ್ ಚಿಟ್ ಪಡೆಯುವುದು ದೊಡ್ಡ ವಿಷಯವಲ್ಲ. ಅವರು ಎಲ್ಲಾ ಭ್ರಷ್ಟರಿಗೆ ಆಶ್ರಯ ಕೊಟ್ಟಿರುವಂತಹ ಸಿಎಂ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಧಿಕಾರ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ, ಬ್ಯಾಲೆಟ್ ವಿರೋಧಿಸುತ್ತೇವೆ: ಅಶ್ವಥ್ ನಾರಾಯಣ