ಕಾರವಾರ: ದಲಿತ ಯುವಕ ಹಾಗೂ ಮರಾಠ ಯುವತಿ ಪ್ರೀತಿಗೆ ಬೆಂಬಲಿಸಿದ ದಲಿತರಿಗೆ ಹಾಗೂ ಪೊಲೀಸರಿಗೆ ಸಚಿವ ಆರ್.ವಿ ದೇಶಪಾಂಡೆ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಘೋಟ್ನೇಕರ್ ಅವಾಚ್ಯ ಶಬ್ದದಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿ ಘೋಟ್ನೇಕರ್ ಜನಾಂಗಕ್ಕೆ ಸೇರಿದವಳಾಗಿದ್ದು, ದಲಿತ ಯುವಕನನ್ನು ಪ್ರೀತಿಸಿದ್ದಳು. ಮನೆಯಲ್ಲಿ ತಮ್ಮ ಪ್ರೀತಿ ಒಪ್ಪದ ಕಾರಣಕ್ಕೆ ಇಬ್ಬರು ಕೂಡ ಓಡಿಹೋಗಿದ್ದರು. ಈ ಹಿನ್ನೆಲೆ ಠಾಣೆಯಲ್ಲಿ ದೂರು ದಾಖಲಿಸಿ ಅವರಿಬ್ಬರ ವಿವಾಹ ಮಾಡಿಸಲು ದಲಿತ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದರು. ಆದರೆ ತನ್ನ ಪ್ರಭಾವ ಬಳಸಿ ಯುವತಿಯನ್ನು ಯುವಕನಿಂದ ಬೇರ್ಪಡಿಸಲು ಘೋಟ್ನೇಕರ್ ಪ್ರಯತ್ನಿಸಿದ್ದರು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು ಎಂದು ಆರೋಪಿಸಿ ದಲಿತ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ದಲಿತ ಮುಖಂಡರು ಹಾಗೂ ಪೊಲೀಸರಿಗೆ ಠಾಣೆಯಲ್ಲಿಯೇ ಘೋಟ್ನೇಕರ್ ಧಮ್ಕಿ ಹಾಕಿದ್ದಾರಂತೆ. ಹೀಗಾಗಿ ದಲಿತ ಸಂಘಟಕರು ಇದನ್ನು ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಘೋಟ್ನೇಕರ್ ವಿರುದ್ಧ ದೂರನ್ನು ಕೂಡ ದಾಖಲಿಸಿದ್ದಾರೆ.