ಉಡುಪಿ: ರಾಮನಗರ ಬೆಳವಣಿಗೆ ಬಿಜೆಪಿಗೆ ನಮ್ಮ ಸಮ್ಮಿಶ್ರ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಕೊಡುಗೆ ಅಂತ ವಿಧಾನಪರಿಷತ್ ಸದಸ್ಯ ಭೋಜೇಗೌಡ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮನಗರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ 63ನೇ ರಾಜ್ಯೋತ್ಸವ ಕೊಡುಗೆ ಇದು. ದೀಪಾವಳಿ ಹಬ್ಬದ ಉಡುಗೊರೆಯನ್ನು ಫಲಿತಾಂಶದ ದಿನ ಸಮ್ಮಿಶ್ರ ಸರಕಾರ ಕೊಡುತ್ತದೆ. ಹಾಲು ಕುಡಿದವರೇ ಬದುಕಲ್ಲ, ವಿಷ ಕುಡಿದವರೇ ಬದುಕ್ತಾರೇನ್ರೀ? 1 ಲಕ್ಷ ಮತಗಳ ಅಂತರದಲ್ಲಿ ರಾಮನಗರದಲ್ಲಿ ಗೆಲ್ಲುತ್ತೇವೆ. ರಾಮನಗರದ ಬೆಳವಣಿಗೆಗೆ ಅಭ್ಯರ್ಥಿಯೇ ಮಾಸ್ಟರ್ ಮೈಂಡ್ ಎಂದು ಬಿಜೆಪಿಯವರಿಗೆ ಮಾತಿನಲ್ಲೇ ಕುಕ್ಕಿದರು.
ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಮಾತಿನ ಮೇಲೆ ನಿಗಾ ಇರಿಸಲಿ. ನಮ್ಮ ಅಭ್ಯರ್ಥಿಯನ್ನು ಕಂಡವರ ಮಕ್ಕಳೆಂದು ಹೇಳುತ್ತಾರೆ. ಮಧು ಬಂಗಾರಪ್ಪ ಕಂಡವರ ಮಕ್ಕಳಾ? ರಾಮನಗರದಲ್ಲಿ ಯಾರು ಯಾರ ಮಕ್ಕಳನ್ನು ತಂದು ನೀವು ನಿಲ್ಲಿಸಿದ್ರಿ? ಹುಟ್ಟಿಸಿ, ಬೆಳೆಸಿದ ವ್ಯಕ್ತಿಗೆ ನಾಮಕರಣ ಮಾಡಿದರೆ, ನಿಮ್ಮ ಮಕ್ಕಳಗಲ್ಲ ಸ್ವಾಮಿ ಅಂತ ದೂರಿದರು.
ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಸತ್ತಿದೆ. ಪಕ್ಕದ ತಟ್ಟೆಯ ನೋಣವನ್ನು ಕಂಡು ಹೀಯಾಳಿಸಬೇಡಿ. ಯಡಿಯೂರಪ್ಪ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ರಾಮನಗರ ಬೆಳವಣಿಗೆ ರಾಷ್ಟ್ರೀಯ ಪಕ್ಷಕ್ಕೆ ಬಹಳ ಆಘಾತ ಆಗಿದೆ. ಪ್ರಜಾಪ್ರಭುತ್ವ ಮಾರಕ ಅಂತ ನೀವು ಹೇಳ್ತೀರಿ, ಆದರೆ ಆಪರೇಷನ್ ಕಮಲ ಮಾರಕ ಅಲ್ವಾ? ಗೆದ್ದ ಶಾಸಕರನ್ನೇ ಖರೀದಿ ಮಾಡಿದ್ದು ಮರೆತು ಹೋಯ್ತೇ ನಿಮಗೆ ಎಂದು ಸವಾಲು ಹಾಕಿದರು.
ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರಾಜಕೀಯವನ್ನು ರಾಜಕೀಯವಾಗಿ ಎದುರಿಸಿದ್ದಾರೆ. ಡಿಕೆಶಿಯವರು ರೆಡ್ಡಿಯಂತೆ ಹೇಡಿಯ ರಾಜಕೀಯ ಮಾಡಿಲ್ಲ. ರೆಡ್ಡಿ ಬ್ರದರ್ಸ್ ಭೂಗತವಾಗಿ ಕೆಲಸ ಮಾಡುವವರು. ರೆಡ್ಡಿ ಅಂಡರ್ ಗ್ರೌಂಡ್ ವ್ಯಾಪಾರದವರು. ಜನಾರ್ದನ ರೆಡ್ಡಿ ಸಮಾಜಘಾತುಕ ಶಕ್ತಿ. ಅವರು ಮತ್ತೆ ಭೂಗತ ಲೋಕಕ್ಕೆ ಹೋಗೋದು ಸೂಕ್ತ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv