– ಸಿಎಎ ಬಗ್ಗೆ ಬಾಯಿ ಬಿಡೋ ನಕಲಿ ಜಾತ್ಯಾತೀತವಾದಿಗಳು ತಬ್ಲಿಘಿಗಳ ಬಗ್ಗೆ ಬಾಯಿಯೇ ಬಿಡುತ್ತಿಲ್ಲ
ಶಿವಮೊಗ್ಗ: ಕೇಂದ್ರ ಸರ್ಕಾರ ಸಿಎಎ ವರದಿ ಜಾರಿಗೆ ಮುಂದಾದ ವೇಳೆ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ, ಆರೋಪ ಮಾಡುತ್ತಿದ್ದ ನಕಲಿ ಜಾತ್ಯಾತೀತವಾದಿಗಳು ಇದೀಗ ರಾಷ್ಟ್ರದ ನೆಮ್ಮದಿ ಹಾಳು ಮಾಡುತ್ತಿರುವ ತಬ್ಲಿಘಿಗಳ ಕೃತ್ಯದ ಬಗ್ಗೆ ಬಾಯಿಯೇ ಬಿಡುತ್ತಿಲ್ಲ ಎಂದು ಎಂಎಲ್ಸಿ ಆಯನೂರು ಮಂಜುನಾಥ್ ಕಿಡಿ ಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ದೇಶದ ಹಿತದೃಷ್ಟಿಯಿಂದ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ತಬ್ಲಿಘಿಗಳ ಕೃತ್ಯವನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಕೊರೊನಾ ಕಾಣಿಸಿಕೊಂಡ ಆರಂಭದ ದಿನದಿಂದಲೂ ಗ್ರೀನ್ಝೋನ್ನಲ್ಲಿದ್ದ ಶಿವಮೊಗ್ಗಕ್ಕೆ ತಬ್ಲಿಘಿಗಳಿಂದಾಗಿ ಅಪಾಯಕಾರಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಬ್ಲಿಘಿ ನಂಟಿನ ಕಾರಣದಿಂದಾಗಿ ಭಯದ ವಾತಾವರಣ ಉಂಟಾಗಿದೆ ಎಂದರು.
ಒಂದು ಸಣ್ಣ ಸಮುದಾಯದಿಂದ ದೇಶದೆಲ್ಲೆಡೆ ಈ ಭೀತಿ ಎದುರಾಗಿದೆ. ಆ ಸಮುದಾಯದ ನಾಯಕರುಗಳು ಸಹ ಕೊರೊನಾ ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸಮುದಾಯದ ಜನರಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಹೇಳಬೇಕಿದ್ದ ನಾಯಕರುಗಳೇ ಇಂದು ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಜಿಹಾದಿನ ಇನ್ನೊಂದು ರೂಪದ ಚಟುವಟಿಕೆಯಾಗಿದೆ. ನಿಜಾಮುದ್ದೀನ್ ಹಾಗೂ ಅಹಮದಾಬಾದ್ನ ಭಯದಿಂದ ದೇಶ ಆತಂಕಕ್ಕೊಳಗಾಗಿದೆ. ಅಲ್ಲದೇ ತಬ್ಲಿಘಿಗಳೆಂದರೆ ಸಂಪೂರ್ಣ ಮುಸಲ್ಮಾನ್ ಸಮುದಾಯವಲ್ಲ. ಇದೊಂದು ಸಣ್ಣ ಸಮೂಹದ ಒಂದು ಗುಂಪು ಈ ರೀತಿ ಚಟುವಟಿಕೆ ನಡೆಸುತ್ತಿದೆ. ಆದರೆ ರಾಷ್ಟ್ರದಲ್ಲಿ ಕೊರೊನಾ ಹಬ್ಬಿಸಲು ಹೊರಟಿದೆಯೇನೋ ಎಂಬ ಸಂಶಯ ಮುಸಲ್ಮಾನ್ ಸಮುದಾಯದ ಕಡೆ ತಿರುವಂತೆ ಮಾಡಿದೆ. ಅಲ್ಲದೇ ಎಲ್ಲಾ ಮುಸಲ್ಮಾನರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈಗಾಗಿ ತಬ್ಲಿಘಿಗಳನ್ನು ಆ ಸಮುದಾಯದ ನಾಯಕರುಗಳೇ ನಿಯಂತ್ರಿಸಬೇಕು. ಆದರೆ ಇದುವರೆಗೂ ಯಾವುದೇ ಮುಖಂಡರು ಇದರ ವಿರುದ್ದ ಧ್ವನಿ ಎತ್ತಲೇ ಇಲ್ಲ. ನಮ್ಮ ರಾಷ್ಟ್ರ, ರಾಜ್ಯಗಳ ಜನರು ಆರೋಗ್ಯವಂತರಾಗಿ ಇರಬೇಕು ಅಂದರೆ ಇವರನ್ನು ನಿಯಂತ್ರಿಸಲೇಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.