ಚೆನ್ನೈ: ತಮಿಳುನಾಡಿನ ಈರೋಡು ಜಿಲ್ಲೆಯಲ್ಲಿ 45 ರ ಹರೆಯದ ಶಾಸಕನ ಜೊತೆ ಮದುವೆ ನಿಶ್ಚಯವಾಗಿದ್ದ ವಧು ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.
ಹೌದು, 45 ವರ್ಷದ ತಮಿಳುನಾಡಿನ ಭವಾನಿಸಾಗರದ ಎಐಡಿಎಂಕೆ ಶಾಸಕನಾದ ಈಶ್ವರನ್ ಹಾಗೂ 23 ವರ್ಷದ ಎಂಸಿಎ ಪದವೀಧರೆ ಸಂಧ್ಯಾಳ ಜೊತೆ ವಿವಾಹ ನಿಶ್ಚಯವಾಗಿತ್ತು. ಅಲ್ಲದೇ ಇದೇ ತಿಂಗಳ 12 ರಂದು ಸತ್ಯಮಂಗಲದ ಬನ್ನಾರಿ ಅಮ್ಮನ್ ದೇವಸ್ಥಾನದಲ್ಲಿ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಮದುವೆಗೆ ಎರಡು ಕುಟುಂಬಗಳು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದರು. ಆದರೆ ಮದುವೆಗೆ ಇಷ್ಟವಿಲ್ಲದ ಯುವತಿ ಶನಿವಾರ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಎಂಸಿಎ ಪದವೀಧರೆಯಾದ ಸಂಧ್ಯಾಳಿಗೆ ಈ ಮದುವೆ ಇಷ್ಟವಿರಲಿಲ್ಲ. ಅಲ್ಲದೇ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ತನ್ನ ತಾಯಿ ತಂಗಮಣಿಗೆ ಸಹೋದರಿ ಮನೆಗೆ ಹೋಗುತ್ತೇನೆಂದು ಹೇಳಿ ಹೊರಟಿದ್ದಾಳೆ. ಆದರೆ ಸಂಜೆಯಾದರೂ ತಂಗಿ ಮನೆಗೆ ಆಕೆ ಹೋಗಿರಲಿಲ್ಲ. ಕೂಡಲೇ ಆಕೆಯ ಮೊಬೈಲಿಗೆ ಕರೆ ಮಾಡಿದರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಪೋಷಕರು ಕಡತೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕನೊಂದಿಗೆ ಮದುವೆಗೆ ಸಂಧ್ಯಾಳಿಗೆ ಇಷ್ಟವಿರಲಿಲ್ಲ. ಅಲ್ಲದೇ ಆಕೆಯು ವಿಘ್ನೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಆತನೊಂದಿಗೆ ಓಡಿ ಹೋಗಿದ್ದಾಳೆಂದು ದೂರಲ್ಲಿ ಉಲ್ಲೇಖಿಸಿದ್ದಾರೆ.
45 ವರ್ಷಗಳ ನಂತರ ಮದುವೆಗೆ ಒಪ್ಪಿದ್ದ ಶಾಸಕನ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಕೇವಲ 11 ದಿನಗಳು ಬಾಕಿ ಇರುವಂತೆ ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮದುವೆ ಮುರಿದು ಬಿದ್ದಿದೆ. ಈ ಮದುವೆಗೆ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಹಾಗೂ ಸಭಾಪತಿ ಪಿ ಧನಪಾಲ್ ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನವನ್ನು ನೀಡಲಾಗಿತ್ತು ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv