ಬೆಳಗಾವಿ: ರಾಜ್ಯ ರಾಜಕೀಯ ಕ್ರಿಕೆಟ್ ಆಟದಲ್ಲಿ ಮತ್ತೆ 3 ವಿಕೆಟ್ ಪತನವಾಗುವ ಸಾಧ್ಯತೆ ಇದ್ದು, ಅದರಲ್ಲೂ ಬೆಳಗಾವಿ ಜಿಲ್ಲೆಯಿಂದಲೇ ಮೂವರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಕಾಗವಾಡ ಶ್ರೀಮಂತ್ ಪಾಟೀಲ್ ಮತ್ತು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಈ ಮೂವರು ನಿರಂತರವಾಗಿ ರೆಬೆಲ್ ಶಾಸಕರ ಜೊತೆ ಸಂಪರ್ಕದಲ್ಲಿದ್ದವರು ಎಂದು ತಿಳಿದು ಬಂದಿದೆ.
ಗಣೇಶ್ ಹುಕ್ಕೇರಿ ಅವರ ಮೊದಲಿನಿಂದಲೂ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿತ್ತು. ಬುಧವಾರ ಎಂಟಿಬಿ ನಾಗರಾಜ್ ಮತ್ತು ಸುಧಾಕರ್, ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಗಣೇಶ್ ಹುಕ್ಕೇರಿ ಕೂಡ ಸ್ಪೀಕರ್ ಕಚೇರಿಗೆ ಬಂದಿದ್ದರು. ಆಗ ಗಣೇಶ್ ಹುಕ್ಕೇರಿ ಕೂಡ ರಾಜೀನಾಮೆ ಕೊಟ್ಟೆ ಬಿಟ್ಟರು ಎಂದು ಹೇಳಲಾಗುತ್ತಿತ್ತು. ಆದರೆ ಅಂದು ಗಣೇಶ್ ಹುಕ್ಕೇರಿ ರಾಜೀನಾಮೆ ಸಲ್ಲಿಸಿರಲಿಲ್ಲ. ಇದೀಗ ರಾಜೀನಾಮೆ ಕೊಡುವವರ ಹೆಸರಿನ ಪಟ್ಟಿಯಲ್ಲಿ ಗಣೇಶ್ ಹುಕ್ಕೇರಿ ಅವರ ಹೆಸರಿದೆ.
ಇಲ್ಲಿವರೆಗೂ 16 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದು, ಸದ್ಯ ಕೆಲವರು ಮುಂಬೈನ ಹೋಟೆಲ್ನಲ್ಲಿ ತಂಗಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಗುರುವಾರ ಸಂಜೆ 6 ಗಂಟೆಯ ಒಳಗಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಂತಯೇ ಅತೃಪ್ತ ಶಾಸಕರು ಓಡೋಡಿ ಬಂದು ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈಗೆ ಮರಳಿದ್ದರು. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.