ಬೆಂಗಳೂರು: ರಾಜ್ಯದಲ್ಲಿ ಸಮಸ್ಯೆಗಳು ತಾಂಡವಾಡುತ್ತಿದ್ದು, ಆದರೆ ಜನ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಮಾತ್ರ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ಜನರ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಹೌದು. 2 ವಾರದಿಂದ ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ನೀರಿಲ್ಲದೇ ಹತ್ತಾರು ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ಆದರೆ ಶಾಸಕರಿಗೆ ಜನರ ಸಮಸ್ಯೆಗಳ ಬಗ್ಗೆ ಪರಿವೆಯೇ ಇಲ್ಲದಂತಾಗಿದೆ.
ತಾಜ್ ವಿವಾಂತ ಹೋಟೆಲಿನಲ್ಲಿ ಹೆಬ್ಬಾಳ ಶಾಸಕರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲಾಗಿದೆ. ಶಾಸಕ ಬೈರತಿ ಸುರೇಶ್ ಅವರು ತಮ್ಮ ಕಾರ್ಯಕರ್ತರ ಜೊತೆ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇತ್ತ ಶಿರಾದಲ್ಲಿ ಶಾಸಕ ಸತ್ಯನಾರಾಯಣ ಅವರು ಹುಟ್ಟುಹಬ್ಬದ ಆಚರಣೆಯಲ್ಲಿ ಬ್ಯುಸಿಯಾಗಿದ್ದಾರೆ.
ಶಾಸಕ ಸತ್ಯನಾರಾಯಣ ಅವರು ರೆಸಾರ್ಟ್ ಬಿಟ್ಟು ಸ್ವ-ಕ್ಷೇತ್ರ ಶಿರಾದಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದೆಡೆ ರಾಜ್ಯದಲ್ಲಿ ರಾಜಕಾರಣಿಗಳ ಹೈಡ್ರಾಮಾ ನಡೆಯುತ್ತಿದ್ದರೆ, ಮತ್ತೊಂದೆಡೆ ಜನ ಪ್ರತಿನಿಧಿಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮೋಜು ಮಸ್ತಿ ಮಾಡುತ್ತಿದ್ದಾರೆ. ಇತ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಮತದಾರರು ಮಾತ್ರ ಕಂಗಾಲಾಗಿರುವುದು ವಿಷಾದನೀಯವಾಗಿದೆ.