ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಲ್ಲು ಹೊಡೆದವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಸಹಾಯ ಮಾಡುತ್ತಿದ್ದಾರೆ. ದೇಗುಲ, ಪೊಲೀಸ್ ಠಾಣೆಗೆ ಕಲ್ಲು ಹೊಡೆದವರಿಗೆ ಜಮೀರ್ ನೆರವು ನೀಡಲು ನಿರ್ಧರಿಸಿದ್ದಾರೆ.
ಹೌದು. ಕಲ್ಲು ಹೊಡೆದು ಅರೆಸ್ಟ್ ಆದವರ ಪರ ಜಮೀರ್ ನಿಂತಿದ್ದು, ಗಲಭೆಕೋರರಿಗೆ ಜಮೀರ್ 5 ಸಾವಿರ ಕ್ಯಾಶ್ ಹಾಗೂ ರಂಜಾನ್ ಫುಡ್ಕಿಟ್ ನೀಡುತ್ತಿರುವ ಮೂಲಕ ಇದೀಗ ಮತ್ತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಂಧನಕ್ಕೊಳಗಾದ ಕಿಡಿಗೇಡಿಗಳ ಕುಟುಂಬಗಳಿಗೆ ಜಮೀರ್ ಸಹಾಯ ಮಾಡಲು ತೀರ್ಮಾನಿಸಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿಯಲ್ಲಿ ಹಣ ಹಾಗೂ ಫುಡ್ಕಿಟ್ ಹಂಚಿಕೆ ಮಾಡಲಾಗುತ್ತಿದ್ದು, ಕಸಬಾ ಪೇಟೆ ಪೊಲೀಸ್ ಠಾಣೆ ಬಳಿಯ ಮಸ್ತಾನ್ ಷಾ ಶಾದಿ ಮಹಲ್ನಲ್ಲಿ ಬೆಂಬಲಿಗರ ಮೂಲಕ ಜಮೀರ್ ಅಹ್ಮದ್ ಸಹಾಯ ಮಾಡಲಿದ್ದಾರೆ. ರಂಜಾನ್ ಹಿನ್ನೆಲೆ ಮೆಕ್ಕಾದಲ್ಲಿರುವ ಜಮೀರ್ ಅಹ್ಮದ್, ಅಲ್ಲಿಂದಲೇ ಗಲಭೆಕೋರರಿಗೆ ಸಹಾಯಹಸ್ತ ಚಾಚಿದ್ದಾರೆ. ಇದನ್ನೂ ಓದಿ: ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ- ಗ್ರಹಣದಂದೇ ಶನಿ ಅಮಾವಾಸ್ಯೆ
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಮೀರ್, ರಂಜಾನ್ ಹಬ್ಬದ ಸಮಯದಲ್ಲಿ ಪವಿತ್ರ ನಮಾಜ್ ವೇಳೆ ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಲಿ. ಜೊತೆಗೆ ಮತ್ತೊಮ್ಮೆ ತಪ್ಪು ಮಾಡದಂತೆ ಬುದ್ಧಿ ನೀಡಲೆಂದು ಅಲ್ಲಾಹ್ ಹಾಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮೆಕ್ಕಾದಲ್ಲಿ ಪವಿತ್ರ ರಂಜಾನ್ ಆಚರಣೆ ಸೇವೆಯಲ್ಲಿ ತೊಡಗಿದ್ದೇನೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನೆಲೆಯಲ್ಲಿ ತಾಯಂದಿರಿಗೆ ಪುಟ್ಟ ಮಕ್ಕಳಿಗೆ ಸಹಾಯಹಸ್ತ. ಈ ಸಹಾಯ ಹಸ್ತ ಯಾವುದೇ ರೀತಿಯ ಬೇರೆ ಅರ್ಥ ಕಲ್ಪಿಸುವುದು ಬೇಡ. ತಪ್ಪು ಮಾಡಿದವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡುವ ಶಿಕ್ಷೆಗೆ ಒಳಪಡಲಿ. ನನ್ನ ಸಹಾಯಹಸ್ತ ಯಾವುದೇ ರೀತಿಯ ತಪ್ಪಿತಸ್ಥರಿಗೆ ಸಹಾಯ ಅಲ್ಲ ಹಾಗೂ ಉತ್ತೇಜನವೂ ಅಲ್ಲ ಎಂದು ತಿಳಿಸಿದ್ದಾರೆ.
ಜಮೀರ್ ಅಹ್ಮದ್ ಅವರ ಎಡವಟ್ಟು ಕೆಲಸ ಇದೇ ಮೊದಲಲ್ಲ. ಹಿಂದೆ ಪಾದರಾಯನಪುರ ಪುಂಡರಿಗೂ ಸಹಾಯ ಮಾಡಿ ವಿವಾದಕ್ಕೀಡಾಗಿದ್ದರು. ಜಾಮೀನಿನಲ್ಲಿ ಹೊರಬಂದ ಪುಂಡರಿಗೆ ಗರಿಗರಿ ನೋಟು ಕೊಟ್ಟಿದ್ದರು. ಅಲ್ಲದೆ ಗಲಾಟೆ ಮಾಡಿದವರ ಪರವಾಗಿ ಮಾತನಾಡಿದ್ದರು. ಜೈಲಿನಿಂದ ಹೊರ ಬಂದವರನ್ನ ಕರೆ ತರಲು ಜಮೀರ್ ಬಸ್ ಕಳುಹಿಸಿದ್ದರು. ಜಾಮೀನಿನಲ್ಲಿ ಬಂದವರಿಗೆ 10 ಸಾವಿರ ಹಣ ಕೊಟ್ಟಿದ್ದರು. ಪಾದರಾಯನಪುರದ ಪುಂಡರಿಗೆ ರೇಷನ್ ಕಿಟ್ ಕೂಡ ನೀಡಿದ್ದರು. ಜಮೀರ್ ಮುಂದೆ ನಿಂತು 110 ಜನರಿಗೆ ಜಾಮೀನು ನೀಡಿದ್ದರು. ಈಗ ಹುಬ್ಬಳ್ಳಿ ಗಹಲಭೆಕೋರರಿಗೆ ಹಣ ಹಾಗೂ ಫುಡ್ಕಿಟ್ ಹಂಚಿಕೆ ಮಾಡುವ ಮೂಲಕ ಮತ್ತೊಮ್ಮೆ ಕೆಂಗಣ್ಣಿಗೆ ಶಾಸಕರು ಗುರಿಯಾಗಿದ್ದಾರೆ.