ಹಾಸನ: ಸಕಲೇಶಪುರ ಜೆಡಿಎಸ್ ಶಾಸಕರಾಗಿರುವ ನನ್ನ ಪತಿ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಆಫರ್ ಮಾಡಿತ್ತು ಎಂದು ಪತ್ನಿ ಚಂಚಲ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪತ್ನಿ ಚಂಚಲ ಕುಮಾರಸ್ವಾಮಿ ಅವರು, ಗಣೇಶ ಚತುರ್ಥಿ ಹಬ್ಬದ ದಿನವೇ ಉದಯ್ ಗೌಡ ಅವರು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮನೆಗೆ ಬಂದು ಡೀಲ್ ಮಾಡಲು ಯತ್ನ ಮಾಡಿದ್ದರು. ಇಷ್ಟು ವರ್ಷ ಪಕ್ಷದಲ್ಲಿದ್ದರೂ ಏನೂ ಸ್ಥಾನಮಾನ ಸಿಕ್ಕಿಲ್ಲ. ನೀವು ಬಿಜೆಪಿ ಸೇರಿ ನಿಮ್ಮನ್ನ ನಾವೇ ಗೆಲ್ಲಿಸಿಕೊಂಡು ಬರುತ್ತೇವೆ. ನಿಮ್ಮನ್ನ ಸಚಿವರನ್ನಾಗಿ ಮಾಡುತ್ತೇವೆ. ಬಿಜೆಪಿಗೆ ಬನ್ನಿ ಎಂದು ಆಫರ್ ನೀಡಿದ್ದಾಗಿ ಹೇಳಿದ್ದಾರೆ.
ನಮ್ಮ ಮನೆಗೂ ಬಂದಾಗ, ಪತಿ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವುದಿಲ್ಲ. ದೇವೇಗೌಡರ ಮೇಲೆ ಗೌರವವಿದೆ. ನಿಮ್ಮ ಜೊತೆ ಬರಲ್ಲ. ನಿಮಗೆ ಬರುತ್ತಾರೆ ಅಂತ ಯಾರೋ ತಪ್ಪು ಮಾಹಿತಿ ಹೇಳಿದ್ದಾರೆ. ನಾವು ಪಕ್ಷ ಬಿಟ್ಟು ಬರುವುದಿಲ್ಲ. ಅದನ್ನು ಕನಸಲ್ಲೂ ನೆನೆಸಿಕೊಳ್ಳಬೇಡಿ ಎಂದು ಹೇಳಿದೆ. ಬಳಿಕ ಅವರು ವಾಪಸ್ ತೆರಳಿದರು ಎಂದು ಚಂಚಲ ಕುಮಾರಸ್ವಾಮಿ ವಿವರಿಸಿದರು.
ಕೆಲವು ದಿನಗಳಿಂದ ಬಿಜೆಪಿಯ ಮೂವರು ಕಿಂಗ್ ಪಿನ್ ಗಳಿಂದ ಶಾಸಕರಿಗೆ ಗಾಳ ಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು. ಶಾಸಕ ಕುಮಾರಸ್ವಾಮಿಗೆ ಬಿಜೆಪಿ ಕಿಂಗ್ ಪಿನ್ ಉದಯ್ ಗೌಡ ಅವರು ಸಚಿವ ಸ್ಥಾನ ಮತ್ತು 30 ಕೋಟಿ ರೂ. ಆಫರ್ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv