ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸರ್ವಶ್ರೇಷ್ಠ ಬಜೆಟ್ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಕೃಷಿಕರಿಗೆ, ಜನಸಾಮಾನ್ಯರಿಗೆ, ಮೀನುಗಾರರಿಗೆ, ಮಹಿಳಾ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಆರೋಗ್ಯ ಕ್ಷೇತ್ರಕ್ಕೆ, ಪ್ರವಾಸೋದ್ಯಮ ಮತ್ತು ವಿವಿಧ ನಿಗಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿ ಸರ್ವಜನ ಸುಖ ಮತ್ತು ಸರ್ವಜನ ಹಿತವಾಗಿರುವ ಬಜೆಟ್ ಮಂಡಿಸಿದ್ದಾರೆ.
ಮಹಿಳಾ ಮೀನುಗಾರರ ಸಬಲೀಕರಣಕ್ಕಾಗಿ 1.5 ಕೋಟಿ ಅನುದಾನದಲ್ಲಿ ಮತ್ರ್ಯ ವಿಕಾಸ ಯೋಜನೆ, ಮಹಿಳಾ ಮೀನುಗಾರರಿಗೆ 5 ಕೋಟಿ ವೆಚ್ಚದಲ್ಲಿ ದ್ವಿಚಕ್ರ ವಾಹನ, ಹೀನ್ನೀರು ಮೀನುಗಾರಿಕೆ ಅಭಿವೃದ್ಧಿ, ಒಂದು ಲಕ್ಷ ಕಟ್ಟಡ ಕಾರ್ಮಿಕರಿಗೆ ಮುಖ್ಯಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ, ಕಟ್ಟಡ ಕಾರ್ಮಿಕರಿಗೆ ಉಚಿತ ಪ್ರಿ ಪೇಯ್ಡ್ ಹೆಲ್ತ್ ಕಾರ್ಡ್ ಯೋಜನೆ, ಕಟ್ಟಡ ಕಾರ್ಮಿಕರಿಗೆ 10 ಮೊಬೈಲ್ ಕ್ಲಿನಿಕ್, ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ಘೊಷಣೆ ಮಾಡಿದ್ದಾರೆ ಎಂದರು.
ಕರಾವಳಿ ಕಿಂಡಿ ಅಣೆಕಟ್ಟು ಯೋಜನೆಗೆ ಅನುದಾನ, ನವನಗರೋತ್ಥಾನ ಯೋಜನೆಗೆ 8,344 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಪ್ರವಾಸೋದ್ಯಮಕ್ಕೆ 500 ಕೋಟಿ, ಈಗಾಗಲೇ ನೆರೆ ಪರಿಹಾರಕ್ಕೆ 3000 ಕೋಟಿ ವಿತರಣೆ, ಕಿಡ್ನಿ ವೈಫಲ್ಯ ಹೊಂದಿದವರಿಗೆ ಉಚಿತ ಪೆರಿಟೋನಿಯಲ್ ಡಯಾಲೀಸಿಸ್ ಯೋಜನೆ, ಸಂಚಾರಿ ಹೆಲ್ತ್ ಕ್ಲಿನಿಕ್ ಆರಂಭ, ಕೃಷಿ ಯೋಜನೆಯ ಅಭಿವೃದ್ಧಿಗೆ 32,259 ಕೋಟಿ ಅನುದಾನ ಸಹಿತ ವಿವಿಧ ಯೋಜನೆಗಳಿಗೆ ಅನುದಾನ ನೀಡುವ ಮೂಲಕ ದೂರದೃಷ್ಟಿಯ, ಶ್ರೇಷ್ಠ ಬಜೆಟ್ ಅನ್ನು ಮಂಡಿಸಿದ ಮುಖ್ಯಮಂತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.