ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ.ಕೆ ಸುಧಾಕರ್ ಅವರ ಬೆಂಬಲಿಗರನ್ನು ಅಮಾನತ್ತು ಮಾಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತನ್ನ ಆದೇಶವನ್ನು ಹಿಂಪಡೆದಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜನವರಿ 8 ರಂದು ಶಾಸಕ ಸುಧಾಕರ್ ಬೆಂಬಲಿಗರನ್ನ ಅಮಾನತು ಮಾಡಿದ್ದ ಕೆಪಿಸಿಸಿ ಒಂದು ವಾರದಲ್ಲೇ ಅಮಾನತು ಆದೇಶ ರದ್ದುಪಡಿಸಿದೆ. ಇದರೊಂದಿಗೆ ಡಾ. ಸುಧಾಕರ್ ಅವರ ಒತ್ತಡಕ್ಕೆ ಮಣಿದಿದೆ ಎಂಬ ಅನುಮಾನ ಮೂಡಿದೆ.
ಶಾಸಕ ಸುಧಾಕರ್ ಅವರಿಗೆ ಪಿಸಿಬಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಜನವರಿ 8 ರಂದು ಪ್ರತಿಭಟನೆ ನಡೆಸಿದ್ದರು. ತಮ್ಮ ಪ್ರತಿಭಟನೆಗೆ ಪಕ್ಷದ ನಾಯಕರು ಬೆಲೆ ನೀಡದ ಪರಿಣಾಮ ಅಸಮಾಧಾನಗೊಂಡ ಶಾಸಕರ ಬೆಂಬಲಿಗರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಕಾರಿಣಿ ಸಭೆ ಬಳಿಯೂ ಪ್ರತಿಭಟನೆ ನಡೆಸಿದ್ದರು.
ಪಕ್ಷದ ಕಾರ್ಯಕರ್ತರ ಪ್ರತಿಭಟನೆಗೆ ಕೆರಳಿದ್ದ ವೇಣುಗೋಪಾಲ್ ಅವರು ಸುಧಾಕರ್ ಅವರ ಬೆಂಬಲಿಗರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಇದರ ಅನ್ವಯ ಕೆಪಿಸಿಸಿ ಕಾರ್ಯರ್ಶಿ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ರಫೀಕ್ ಹಾಗೂ ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಲಾಗಿತ್ತು. ಸದ್ಯ ಈ ಅಮಾನತು ರದ್ದಾಗಿದೆ.
ಆಪರೇಷನ್ ಕಮಲ ಪ್ಲಾಪ್ ಆದ ಸಮಯದಲ್ಲೇ ವೇಣುಗೋಪಾಲ್ ಜೊತೆ ಸಾಕಷ್ಟು ಓಡಾಟ ನಡೆಸಿದ್ದ ಶಾಸಕ ಸುಧಾಕರ್ ತಮ್ಮ ಬೆಂಬಲಿಗರ ಅಮಾನತು ಆದೇಶವನ್ನ ರದ್ದುಪಡಿಸಲು ಈ ಮೂಲಕ ಯಶಸ್ವಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv