ಬೆಂಗಳೂರು: ಐವರು ಅತೃಪ್ತ ಶಾಸಕರು ಸದನಕ್ಕೆ ಗೈರು ಹಾಜರಿ ಹಾಕುವ ಜೊತೆಯಲ್ಲಿ ಈಗ ತಂದೆ ಮತ್ತು ಮಗಳು ಗೈರಾಗಿದ್ದು ಕಾಂಗ್ರೆಸ್ ನಾಯಕರು ಆತಂಕಕ್ಕೆ ಕಾರಣವಾಗಿದೆ. ಬಿಟಿಎಂ ಶಾಸಕ, ಹಿರಿಯ ಕೈ ನಾಯಕ ರಾಮಲಿಂಗಾ ರೆಡ್ಡಿ ಜೊತೆಗೆ ಅವರ ಪುತ್ರಿ ಜಯನಗರಾದ ಶಾಸಕಿ ಸೌಮ್ಯಾ ರೆಡ್ಡಿ ಮೊದಲ ದಿನವೇ ಅಧಿವೇಶನಕ್ಕೆ ಚಕ್ಕರ್ ಹಾಕಿದ್ದಾರೆ.
ಬೆಂಗಳೂರಿನಲ್ಲೇ ತಂದೆ, ಮಗಳು ಇದ್ದರು ಕೂಡ ಸದನಕ್ಕೆ ಗೈರಾಗಲು ಕಾರಣವೇನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಸದನಕ್ಕೆ ಗೈರಾಗುವ ಮೂಲಕ ಪಕ್ಷದ ನಾಯಕರ ವಿರುದ್ಧ ಇವರಿಬ್ಬರು ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದರಾ ಎನ್ನುವ ಪ್ರಶ್ನೆ ಎದ್ದಿದೆ.
ಸಮ್ಮಿಶ್ರ ಸರ್ಕಾರದ ರಚನೆ ವೇಳೆ ಅನುಭವಿ ಹಾಗೂ ಹಿರಿಯ ನಾಯಕರಾಗಿದ್ದ ರಾಮಲಿಂಗಾ ರೆಡ್ಡಿ ಅವರನ್ನು ದೂರವಿಟ್ಟಿದ್ದರು. ಈ ಕುರಿತು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆ ಆಗಿದ್ದ ಸೌಮ್ಯ ರೆಡ್ಡಿ ಅವರು ನಾಯಕರ ವಿರುದ್ಧ ಬಹಿರಂಗವಾಗಿಯೇ ಆಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇಬ್ಬರನ್ನು ಅಸಮಾಧಾನ ಪಡಿಸಲು ಮುಂದಾಗಿದ್ದ ಹೈಕಮಾಂಡ್ ಸೌಮ್ಯ ರೆಡ್ಡಿ ಅವರಿಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಿತ್ತು. ಇದಕ್ಕೂ ಮುನ್ನ ಅಂದರೆ ಸಂಪುಟ ವಿಸ್ತರಣೆ ವೇಳೆ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿತ್ತು. ಆದರೆ ಇದನ್ನು ಸೌಮ್ಯ ರೆಡ್ಡಿ ಅವರು ತಿರಸ್ಕರಿಸಿದ್ದರು.
ನನಗೆ ನನ್ನ ಕ್ಷೇತ್ರದ ಜನರಿಗೆ ಕೆಲ್ಸ ಮಾಡಿ ಅವರ ಋಣವನ್ನು ತೀರಿಸಬೇಕಾಗಿದೆ. ನನ್ನ ತಂದೆ 2 ಬಾರಿ ಡಿಸಿಸಿ ಅಧ್ಯಕ್ಷರಾಗಿ ಹಾಗೂ 7 ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳ ದುಡಿದಿದ್ದಾರೆ. ಆದ್ರೂ ನನ್ನ ತಂದೆಯವರಿಗೆ ಸಚಿವ ಸ್ಥಾನ ಸಿಗದಿರುವುದು ಬೆಸರದ ಸಂಗತಿ. ಕೇವಲ ಒಂದು ಶಾಸಕರಿಂದಾಗಿ ಈಗ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಶಾಸಕರಿದ್ದಾರೆ. ನಾನು ಅವರನ್ನು ಮಂತ್ರಿಯಾಗಿ ನೋಡಲು ಇಷ್ಟಪಡುತ್ತೇನೆ. ಬೆಂಗಳೂರಿನಲ್ಲಿ ಎಲ್ಲ 28 ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರು ಗೆಲ್ಲಲು ಶ್ರಮಿಸಬೇಕಾದ ಅಗತ್ಯ ಇದೆ ಅಂತ ಬರೆದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv