ಊರಿಗೆ ಬಂದವ್ರು ನೀರಿಗೆ ಬರದೇ ಹೋಗ್ತಾರಾ? ಸಂಪುಟ ವಿಸ್ತರಣೆಗೆ ಎಸ್.ಆರ್.ವಿಶ್ವನಾಥ್ ಪ್ರತಿಕ್ರಿಯೆ

Public TV
1 Min Read
S R Vishwanath

ಬೆಂಗಳೂರು: ಊರಿಗೆ ಬಂದವರು ನೀರಿಗೆ ಬರದೇ ಹೋಗ್ತಾರಾ..? ಹೀಗಂತ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ರಾಜಕಿಯ ಕಾರ್ಯದರ್ಶಿ ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್.ಅರ್. ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.

ವಿದೇಶ ಪ್ರವಾಸ ಕೈಗೊಂಡ ಸಿಎಂ ಯಡಿಯೂರಪ್ಪರನ್ನ ಬೀಳ್ಕೊಟ್ಟು ಕೆಐಎಎಲ್ ನಲ್ಲಿ ಮಾತನಾಡಿದ ಎಸ್ ಆರ್ ವಿಶ್ವನಾಥ್, ಸಚಿವ ಸಂಪುಟದ ವಿಸ್ತರಣೆಗೆ ಅಮಿತ್ ಶಾ ಜೊತೆ ನಿನ್ನೆ ಅರ್ಧ ಗಂಟೆ ಸಿಎಂ ಯಡಿಯೂರಪ್ಪ ಸೌಹಾರ್ದಯುತ ಚರ್ಚೆ ನಡೆಸಿದ್ದಾರೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಗೆ ಅಮಿತ್ ಶಾ ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

ವಿದೇಶದಿಂದ ಸಿಎಂ ಬಂದ ಕೂಡಲೇ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ.ನಡ್ಡಾ ಜೊತೆ ಚರ್ಚೆ ಮಾಡಿ ಸಚಿವ ಸಂಪುಟ ವಿಸ್ತರಣೆ ಫೈನಲ್ ಮಾಡುವುದಾಗಿ ತಿಳಿಸಿದರು. ಆದ್ರೆ ಈ ವಿಚಾರದಲ್ಲಿ ಸ್ವಲ್ಪ ವಿಳಂಬವಾಗಿದೆ. ಊರಿಗೆ ಬಂದವರು ನೀರಿಗೆ ಬರದೇ ಹೋಗ್ತಾರಾ ಎಂದು ಹೇಳುವ ಮೂಲಕ ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ಖಚಿತ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಸಂಪುಟ ವಿಸ್ತರಣೆ ವಿಳಂಬವಾಗಿದೆಯೇ ಹೊರತು ಯಾರಿಗೂ ಅಸಮಾಧಾನಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *