ಬೆಂಗಳೂರು: ಉಸ್ತುವಾರಿ ಸಚಿವರ ನೇಮಕ ವಿಳಂಬಕ್ಕೆ ಸಂಬಂಧಿಸಿದಂತೆ ಸಿಎಂ ಎಚ್ಡಿಕೆ, ಡಿಸಿಎಂ ಪರಮೇಶ್ವರ್ ಎದುರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಮಾಡದಿದ್ದರೂ ಪರವಾಗಿಲ್ಲ, ಜಿಲ್ಲೆಗೆ ಉಸ್ತುವಾರಿ ಸಚಿವರನ್ನ ನೇಮಕ ಮಾಡಿ ಅಂತ ಶಾಸಕರು ಒತ್ತಾಯಿಸುತ್ತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಎಲ್ಲದಕ್ಕೂ ಆಷಾಢ ಅಂತೀರಾ, ಆದ್ರೆ ನಮ್ಮ ಜಿಲ್ಲೆಯಲ್ಲಿ ನಮ್ಮನ್ನ ಕೇಳೋರೇ ಇಲ್ಲದಾಗಿದೆ. ನಮ್ಮ ಜಿಲ್ಲೆಗಳಲ್ಲಿ ಮಳೆ ಹೆಚ್ಚಿದೆ. ಹಾನಿ ಪ್ರಮಾಣವೂ ಕೂಡ ಅಷ್ಟೇ ಇದೆ. ಉಸ್ತುವಾರಿ ಸಚಿವರಿಲ್ಲದೇ ಯಾವ ಕೆಲಸವೂ ಆಗಲ್ಲ, ಅಧಿಕಾರಿಗಳು ಕೆಲಸ ಮಾಡಲ್ಲ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಜಿಲ್ಲೆಗೆ ಉಸ್ತುವಾರಿ ಸಚಿವರು ಬೇಕು. ಹೀಗಾಗಿ ಕೂಡಲೇ ಉಸ್ತುವಾರಿ ಸಚಿವರ ನೇಮಿಸಿ ಅಂತಾ ಕೆಲ ಶಾಸಕರ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಶಾಸಕರ ಒತ್ತಡದ ಮೇರೆಗಾದ್ರೂ ಆಷಾಢದ ನೆಪ ಹೇಳದೇ ಈ ತಿಂಗಳಲ್ಲೇ ಜಿಲ್ಲಾ ಉಸ್ತುವಾರಿಗಳ ನೇಮಕ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.