ದಾವಣಗೆರೆ: ಇಲ್ಲಿನ ಅತೀ ದೊಡ್ಡ ಗ್ಲಾಸ್ ಹೌಸ್ ಗೆ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಭೇಟಿ ನೀಡಿದ್ದು, ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.
ನಗರದ ಕುಂದಾವಾಡ ಕೆರೆಯ ಪಕ್ಕದಲ್ಲಿರುವ ಗ್ಲಾಸ್ ಹೌಸನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಆದರೆ ಜನರಿಗೆ ಪ್ರವಾಸಿತಾಣವಾಗಿ ಅನುಕೂಲ ಮಾಡಿಕೊಟ್ಟಿರಲ್ಲಿಲ್ಲ. ಆದ್ದರಿಂದ ಆಗಸ್ಟ್ 15 ರ ಒಳಗೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಪ್ರವಾಸಕ್ಕೆ ಅನುವು ಮಾಡಿಕೊಡಲಾಗುವುದು.
ಕೆಲ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಇದರ ಬಗ್ಗೆ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದ್ದಾರೆ.
ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದರು. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯು ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿದೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಿರ್ಮಾಣವಾಗಿರೋ ಈ ಗಾಜಿನ ಅರಮನೆ ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನು ಹೊಂದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ. ಗಾಜಿನ ಮನೆಗೆ 13.35 ರೂ. ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, 1.50 ಕೋಟಿ ರೂ. ವೆಚ್ಚದಲ್ಲಿ ಗ್ರಾನೈಟ್, 1.99 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್, 1.08 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕೆ ಮಾಹಿತಿ ಕೇಂದ್ರ, ರಸ್ತೆ ನಿರ್ಮಾಣ, ಸುತ್ತಮುತ್ತ ವಿದೇಶಿ ಗಿಡಗಳನ್ನ ಬೆಳೆಸುವ ಜೊತೆ ಸುಂದರವಾದ ಉದ್ಯಾನವನ ನಿರ್ಮಾಣದ ಗುರಿ ಹೊಂದಲಾಗಿತ್ತು.