ಧಾರವಾಡ: ಹೊನ್ನಾಳಿ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ ಪತ್ತೆಯಾಗಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ವರದಿಯನ್ನು ಬಿತ್ತರಿಸಿತ್ತು. ಈ ಹಿನ್ನೆಲೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಈ ಸಾಮಾಗ್ರಿಗಳನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ನೆರೆ ಸಂತ್ರಸ್ತರಿಗೆ ಕೊಡುವ ಕೆಲಸ ಮಾಡಿದ್ದಾರೆ.
ಇಂದು ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಅವರು, ಸಾಂಕೇತಿಕವಾಗಿ ಸಾಮಾಗ್ರಿಗಳನ್ನು 5 ಮಂದಿ ನೆರೆ ಸಂತ್ರಸ್ತರಿಗೆ ನೀಡಿದರು. ನಂತರ ಮಾತನಾಡಿದ ಅವರು, ಅದು ನನ್ನ ಕಚೇರಿಯಲ್ಲಿ ಇಟ್ಟಿರಲಿಲ್ಲ ಬದಲಾಗಿ ಶಾಸಕರ ಕಚೇರಿ ಎಂದು ಬರೆದಿದ್ದ ಕಚೇರಿಯಲ್ಲಿ ಪರಿಹಾರ ಸಾಮಗ್ರಿ ಇದ್ದವು ಎಂದರು. ಹಾಗೆಯೇ ಎಲ್ಲಾ ಸಾಮಾಗ್ರಿಗಳನ್ನು ಪಾರದರ್ಶಕವಾಗಿಯೇ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಗಳ ತಪ್ಪಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ತಾಲೂಕಿನ ಜನರೆಲ್ಲಾ ಸೇರಿ ಈ ಸಾಮಗ್ರಿಗಳನ್ನ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ್ದಾರೆ. ಅಧಿಕೃತವಾಗಿ ನಾವು ಸಂಗ್ರಹಣೆ ಮಾಡಿ ಪಾರದರ್ಶಕವಾಗಿ ಕೊಡಲು ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟಿದ್ದೇವೆ. ನಾನು ಉಪಚುನಾವಣೆಯ ಕೆಲಸದಲ್ಲಿ ಇದ್ದ ಕಾರಣ ನೇರೆ ಸಾಮಗ್ರಿ ವಿತರಣೆ ತಡವಾಗಿದೆ ಎಂದು ತಿಳಿಸಿದರು.