ತುಮಕೂರು: ಕಾರ್ಯಕ್ರಮವೊಂದರಲ್ಲಿ ಸಚಿವ ಡಿಕೆಶಿ ಎದುರೇ ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅವರು ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಮಧುಗಿರಿಯ ಬಡವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ನಮ್ಮ ಕ್ಷೇತ್ರದಲ್ಲಿ ಸುಮಾರು 15-20 ದಿವಸದ ಹಿಂದೆಯೇ ಹೇಳಿದ್ದೆ. ಸಾಲ ಮನ್ನಾ ಆಗ್ತದೆ. ಹೀಗಾಗಿ ಎಲ್ಲರೂ ಸಾಲ ತಗೊಳ್ಳಿ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಬಾರಿ ಸಾಲ ಮನ್ನಾ ಮಾಡೇ ಮಾಡುತ್ತದೆ ಅಂತ ಹೇಳಿದ್ದೆನು.
ಇನ್ನು ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ನಮ್ಮ ತಾಲೂಕು, ನಮ್ಮ ಕ್ಷೇತ್ರಕ್ಕೆ 74 ಕೋಟಿ ರೂ. ಸಾಲ ಮನ್ನಾ ಆಗಿದೆ. ಸುಮಾರು 25,526 ಕುಟುಂಬದ ಸಾಲ ಮನ್ನಾ ಆಗಿದೆ. ಸಾಲ ಕೊಡುವ ಸಮಯದಲ್ಲಿ ನಾವೇನು ನಮ್ಮ ಪಾರ್ಟಿಯವನಾ ಅಂತ ಕೇಳ್ತಾ ಇರಲಿಲ್ಲ. ಅಥವಾ ನಮ್ಮ ಪಾರ್ಟಿಯವರಿಗೆ ಮಾತ್ರ ಸಾಲ ಕೊಡಿ ಅಂತಾನೂ ಹೇಳಿಲ್ಲ. ನಮ್ಮ ಜಾತಿಯವರು ಅಂತ ಕೇಳಿಯೂ ಸಾಲ ಕೊಟ್ಟಿಲ್ಲ. ರೈತಾಪಿ ಕುಟುಂಬದ ಜನ ಕಷ್ಟದಲ್ಲಿದ್ದಾರೆ ಅಂತ ಸಾಲ ಕೊಟ್ಟಿದ್ದೇವೆ ಅಂತ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇದೀಗ ಸಚಿವ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ರಾಜಣ್ಣ ಗಂಟಾಘೋಷವಾಗಿ ಸಾಲ ಮನ್ನಾ ರಹಸ್ಯವನ್ನ ಬಿಚ್ಚಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.