ಹಾವೇರಿ: ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾಗಿ 11 ದಿನಗಳು ಕಳೆದಿದೆ. ಯುದ್ಧ ನಿಲ್ಲುವ ಯಾವ ಲಕ್ಷಗಳು ಕೂಡ ಕಾಣುತ್ತಿಲ್ಲ. ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಉಕ್ರೇನ್ನಲ್ಲಿ ಶೆಲ್ ದಾಳಿಗೆ ತುತ್ತಾದ ನವೀನ್ ನಿವಾಸಕ್ಕೆ ಭೇಟಿ ಸಾಂತ್ವನ ಹೇಳಿದರು.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಕ್ಕೆ ಭೇಟಿ ನೀಡಿ ನವೀನ್ ಭಾವಚಿತ್ರಕ್ಕೆ ಪುಷ್ಪ ಹಾಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರೇಣುಕಾಚಾರ್ಯ ಅವರು ವೈಯಕ್ತಿಕವಾಗಿ ಒಂದು ಲಕ್ಷ ರುಪಾಯಿ ವಿತರಿಸಿದರು. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್
ಬಳಿಕ ಮಾತನಾಡಿದ ಅವರು, ನವೀನ್ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಮನೆಯವರು ಹಾಗೂ ಸ್ಥಳೀಯ ಶಾಸಕರ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದರು. ಕೊನೆಯ ಬಾರಿ ನವೀನ್ ಮುಖ ನೋಡಬೇಕು ಎಂಬುದು ಮನೆಯವರ ಆಸೆಯಾಗಿದೆ. ಅವರ ಪಾರ್ಥಿವ ಶರೀರ ತರುವ ಸಲುವಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಕೂಡ ಪಾರ್ಥಿವ ಶರೀರ ತರುವ ಸಲುವಾಗಿ ಪ್ರಯತ್ನ ನಡೆಸಿದೆ ಎಂದರು.
ಉಕ್ರೇನ್ನಲ್ಲಿರುವ ಇನ್ನೂ ಹಲವು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಸಿವಿನಿಂದ ಬಳಲುವ ಸಂದರ್ಭದಲ್ಲಿ ಉಪಹಾರ ತರಲು ಹೋಗಿ ನವೀನ್ ಮೃತಪಟ್ಟಿದ್ದಾರೆ. ಆ ದೇಶದ ಆಂತರಿಕ ವಿಚಾರಗಳಿಂದ ಒಬ್ಬ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ. ನವೀನ ಕುಟುಂಬ ಸಾಕಷ್ಟು ನೋವಿನಲ್ಲಿ ನರಳುತ್ತಿದೆ ಎಂದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್ವೈ
ಕೇಂದ್ರ ಮತ್ತು ರಾಜ್ಯ ಸರ್ಕಾರ ನಾವೆಲ್ಲರೂ ಸೇರಿ ನವೀನ್ ಕುಟುಂಬದ ಓರ್ವ ಸದಸ್ಯರಾಗಿ ಪಾರ್ಥಿವ ಶರೀರ ತರುವ ಕೆಲಸ ಮಾಡುತ್ತಿದ್ದೇವೆ. ನವೀನ್ ಕಳೆದುಕೊಂಡ ದುಃಖ ಭರಿಸುವ ಶಕ್ತಿಯನ್ನ ದೇವರು ಅವರ ತಂದೆ-ತಾಯಿಗೆ ನೀಡಲಿ ಎಂದು ರೇಣುಕಾಚಾರ್ಯ ಅವರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.