ದಾವಣಗೆರೆ: ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ. ಆದ್ರೆ ಪಕ್ಷ ಸಂಘಟನೆಯಲ್ಲಿ ಇರ್ತಿನಿ. ಕಲುಷಿತ ರಾಜಕೀಯ, ದುಬಾರಿ ಚುನಾವಣೆಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹರಪ್ಪನಹಳ್ಳಿ ಕಾಂಗ್ರೆಸ್ ಶಾಸಕ ಎಂಪಿ ರವೀಂದ್ರ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಭಾವುಕರಾದ ಅವರು, ನನ್ನನ್ನು ಪಕ್ಷ ಕಡೆಗಣಿಸಿಲ್ಲ. ಸಿಎಂ ಕಡೆಗಣಿಸಿಲ್ಲ. ನನ್ನ ಚುನಾವಣೆಯ ಸ್ವಯಂ ನಿವೃತ್ತಿ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಬಹಳ ದಿನದ ಆಲೋಚನೆ ಮಾಡಿ ನಾನು ನಿರ್ಧಾರ ಪ್ರಕಟಿಸಿದ್ದೇನೆ ಎಂದು ಹೇಳಿ ಗದ್ಗದಿತರಾದ್ರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ತಂದೆಗೆ ಸಮಾನ. ಅವರ ಬಗ್ಗೆ ನನಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ, ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇನೆ. ವ್ಯವಸ್ಥೆ ಸರಿ ಇಲ್ಲ, ವೈಯಕ್ತಿಕ ಕಾರಣದಿಂದ ನಾನು ಚುನಾವಣೆ ನಿವೃತ್ತಿ ಪಡೆಯುತ್ತಿದ್ದೇನೆ ಅಂದ್ರು.
ಎಂ ರವೀಂದ್ರ ಚುನಾವಣಾ ನಿವೃತ್ತಿ ಹೇಳಿಕೆ ಹಿನ್ನಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕೂಡಲೇ ಎಂ ಪಿ ರವೀಂದ್ರ ರವರು ಹೇಳಿಕೆಯನ್ನು ಹಿಂಪಡೆಯಬೇಕು. ಅವರೇ ಮತ್ತೇ ನಮ್ಮ ಶಾಸಕರಾಗಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ರು.
ಅಲ್ಲದೇ ಎಂಪಿ ರವೀಂದ್ರ ಅಭಿಮಾನಿಗಳು ಹರಪ್ಪನಹಳ್ಳಿಯ ಪ್ರವಾಸಿ ಮಂದಿರದ ಬಳಿ ಪೆಟ್ರೋಲ್ ಸುರಿದುಕೊಂಡ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ರು.