ಬೆಂಗಳೂರು: ಮಾಜಿ ಪ್ರಧಾನಿ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಬಳಿಕ ವಿಧಾನಸೌಧದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರೊಂದಿಗೆ ಚರ್ಚೆ ನಡೆಸಿ ಸಿಎಂ ಕುಮಾರಸ್ವಾಮಿ ಅವರು ಕುತೂಹಲ ಮೂಡಿಸಿದರು.
ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಅವರ ಮನವೊಲಿಕೆಗೆ ಮತ್ತೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದ್ದು, ಮಹೇಶ್ ಕುಮಟಳ್ಳಿ ಅವರು ಮೂಲಕ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಸತತ ಒಂದು ಗಂಟೆ ವಿಧಾನಸೌಧದಲ್ಲಿ ಮಹೇಶ್ ಕುಮಟಳ್ಳಿ ಜೊತೆ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಚರ್ಚೆ ನಡೆಸಿದ್ದರು. ಆ ಬಳಿಕ ಕುಮಟಳ್ಳಿ ಅವರು ನೇರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ್ದರು. ಕುಮಟಳ್ಳಿ ಅವರ ಮೂಲಕ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ರಮೇಶ್ ಜಾರಕಿಹೊಳಿಗೆ ಸಿಎಂ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದ್ದು, ಮತ್ತೆ ರಮೇಶ್ ಜಾರಕಿಹೊಳಿಯವರನ್ನ ಮಂತ್ರಿ ಮಾಡುವ ಆಫರ್ ನೀಡಿದ್ದರಾ ಎಂಬ ಪ್ರಶ್ನೆ ಮೂಡಿದೆ.
ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮತ್ತೆ ಮಹೇಶ್ ಕುಮಟಳ್ಳಿ ಅವರು ಸಿಎಂ ಕುಮಾರಸ್ವಾಮಿರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ಸಿಎಂ ಸಂದೇಶಕ್ಕೆ ಜಾರಕಿಹೊಳಿ ಏನು ಹೇಳಿದ್ದಾರೆ ಎಂಬ ವರದಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲದೇ ರಮೇಶ್ ಅವರ ಬೇಡಿಕೆಗಳನ್ನು ಕುಮಟಳ್ಳಿ ಅವರು ಸಿಎಂ ಮುಂದಿಡಲಿದ್ದಾರೆ.
ಇತ್ತ ರಮೇಶ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಶಾಸಕ ಮಹೇಶ ಕುಮಟಳ್ಳಿ, ಸತೀಶ್ ಜಾರಕಿಹೊಳಿ ಜೊತೆಗೆ ರಮೇಶ್ ಜಾರಕಿಹೊಳಿ ಅವರಿಗೂ ಸಚಿವ ಸ್ಥಾನ ಕೊಡಲಿ. ಇಬ್ಬರು ಸಹೋದರು ಕೂಡ ಸಂಘಟನಾ ಚತುರರು. ಸದ್ಯ ಸತೀಶ ಜಾರಕಿಹೊಳಿ ಸಚಿವರಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಲಿ. ನಾನು ಸಿಎಂ ಭೇಟಿ ಮಾಡಿ ಕ್ಷೇತ್ರಕ್ಕೆ ಅಗತ್ಯವಿರುವ ನೀರಿನ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇನೆ. ಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡವನಲ್ಲ ಎಂದು ತಿಳಿಸಿದರು. ಅಲ್ಲದೇ ಆಪರೇಷನ್ ಕಮಲದ ಬಗ್ಗೆ ಮಾತನಾಡುವುದಾದರೆ ರಹಸ್ಯವಾಗಿ ಬರಬಹುದಿತ್ತು, ಆದರೆ ನಾನು ಆ ಬಗ್ಗೆ ಚರ್ಚೆ ಮಾಡಲು ಬಂದಿಲ್ಲ ಎಂದು ಸಿಎಂ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಸಂದೇಶ ವಾಹಕನ ವಿಚಾರವನ್ನ ಅಲ್ಲಗೆಳೆದರು.