ಮೈಸೂರು: ಜಿಲ್ಲೆಯ ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಹರ್ಷವರ್ಧನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇವಾಲಯ ತೆರವು ಮಾಡಲು ಜಿಲ್ಲಾಧಿಕಾರಿಯಿಂದಲೇ ಆದೇಶ ನೀಡಲಾಗಿತ್ತು ಎಂದು ಹೇಳುವ ಮೂಲಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ದೇವಸ್ಥಾನ ಉಳಿಸಲು ಡಿಸಿಗೆ ತಹಶೀಲ್ದಾರ್ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದರು. ತಹಶೀಲ್ದಾರ್ ಡಿಸಿಗೆ ವರದಿ ಕೊಟ್ಟಾಗ, ಯಾವ ಆಧಾರದ ಮೇಲೆ ದೇವಸ್ಥಾನ ಉಳಿಸುತ್ತೀರಾ ಎಂದು ಡಿಸಿ ಪ್ರಶ್ನಿಸಿದ್ದಾರೆ. ಆಗ ತಹಶೀಲ್ದಾರ್ ಬಳಿ ಉತ್ತರ ಇರಲಿಲ್ಲ. ಎಲ್ಲ ಕಡೆ ದೇವಸ್ಥಾನ ತೆರವು ಮಾಡಿದ್ದೇವೆ. ಮಹದೇವಮ್ಮ ದೇವಸ್ಥಾನಕ್ಕೂ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ. ಆದ್ದರಿಂದ ದೇವಸ್ಥಾನ ತೆರವು ಮಾಡಬೇಕು ಎಂದು ಡಿಸಿ ಆದೇಶ ನೀಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ತಾಲಿಬಾನಿ, ಐಎಸ್ಐ ಉಗ್ರರನ್ನು ಬಿಟ್ಟು ಭಾರತದಲ್ಲಿ ದಾಳಿಯಾಗುವಂತೆ ಮಾಡಿದ್ದು ಯಾರು – ಸಿಟಿ ರವಿ ಪ್ರಶ್ನೆ
ಠಾಣಾ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 13 ದೇವಸ್ಥಾನಗಳನ್ನು ಉಳಿಸಲಾಯಿತು. ಮಹದೇವಮ್ಮ ದೇವಸ್ಥಾನವನ್ನು ಉಳಿಸುವಂತೆ ತಹಶೀಲ್ದಾರ್ ಗೆ ರಿಪೋರ್ಟ್ ಕಳುಹಿಸಿದ್ದೆ. ಅದರಂತೆ ತಹಶೀಲ್ದಾರ್ ಅವರು ಡಿಸಿಗೆ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ. ಆದರೆ ಯಾವುದೇ ದಾಖಲಾತಿ ಇಲ್ಲದೇ ದೇವಸ್ಥಾನ ಹೇಗೆ ಉಳಿಸುತ್ತೀರಾ? ಎಂದು ಪ್ರಶ್ನಿಸಿ ದೇವಾಲಯ ತೆರವಿಗೆ ಡಿಸಿ ಆದೇಶ ನೀಡಿದ್ದಾರೆ. ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ಮಾಡಿರುವುದಕ್ಕೆ ನನಗೂ ಬೇಸರವಿದೆ. ಈ ಸಂಬಂಧ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಶಾಸಕರು ಹೇಳಿದ್ದಾರೆ.