ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾದ ವಿದ್ವತ್ ನಗರದ ಮಲ್ಯ ಆಸ್ಪತ್ರೆಯಿಂದ ಭಾನುವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿದ ಹ್ಯಾರಿಸ್, ದೇವರ ದಯೆಯಿಂದ ವಿದ್ವತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಬಳಿಕ ಆತ ಈಗಾಗಲೇ ಡಿಸ್ಚಾರ್ಜ್ ಆಗಿದ್ದು ಖುಷಿತಂದಿದೆ. ವೈದ್ಯರ ಡಿಸ್ಚಾರ್ಜ್ ಶೀಟ್ ನಲ್ಲಿ ವಿದ್ವತ್ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಅಂತ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಆತ ಚೇತರಿಸಿಕೊಳ್ಳುವಂತೆ ಶ್ರಮಿಸಿದ ಮಲ್ಯ ಆಸ್ಪತ್ರೆ ವೈದ್ಯರಿಗೂ ಮತ್ತು ಸಿಬ್ಬಂದಿಗೂ ಧನ್ಯವಾದ ಎಂದು ಹ್ಯಾರಿಸ್ ಹೇಳಿದ್ದಾರೆ. ವಿದ್ವತ್ ಮತ್ತು ಆತನ ಕುಟುಂಬಸ್ಥರಲ್ಲಿ ಸಂತೋಷ ನೆಲೆಸಲಿ ಅಂತ ಹ್ಯಾರಿಸ್ ಹಾರೈಸಿದ್ದಾರೆ. ಇದನ್ನೂ ಓದಿ: ನಲಪಾಡ್ ಹಲ್ಲೆ ಪ್ರಕರಣ- ಹಲ್ಲೆಗೊಳಗಾಗಿದ್ದ ವಿದ್ವತ್ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್
ವಿದ್ವತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಯಾಗಿರೋ ನಲಪಾಡ್ ಕೂಡ ಸಂತಸದಿಂದಿದ್ದಾನೆ. ಯಾಕಂದ್ರೆ ಪ್ರಕರಣ ಸಂಬಂಧ ನಾಳೆ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದಾನೆ. ನಿನ್ನೆ ರಾತ್ರಿ ತಂದೆ ಹ್ಯಾರಿಸ್ಗೆ ಫೋನ್ ಮಾಡಿ ಖುಷಿಯಿಂದ ಮಾತನಾಡಿದ್ದಾನೆ. ಅಲ್ಲದೇ ನಾಳೆ ಯಾವುದೇ ಕಾರಣಕ್ಕೂ ಬೇಲ್ ಮಿಸ್ ಆಗದಂತೆ ಎಚ್ಚರಿಕೆ ನೀಡಿದ್ದಾನೆ ಅಂತ ಜೈಲಿನ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜಾಮೀನಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಪ್ಪನಿಗೆ ರೌಡಿ ನಲಪಾಡ್ ಸೂಚನೆ!