ತುಮಕೂರು: ಸರ್ಕಾರಕ್ಕೆ ಏನಾದ್ರೂ ಆದರೆ ನಮಗೇನು ಬೇಜಾರಿಲ್ಲ. ಇದ್ದರೆ ಕೆಲಸ ಮಾಡುತ್ತೇವೆ, ಇಲ್ಲಾ ಅಂದರೆ ಮನೆಗೆ ಹೋಗುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸ್ ಅವರು, ಸರ್ಕಾರದಲ್ಲಿ ಒಂದೇ ಮನಸ್ಥಿತಿಯ ಶಾಸಕರು ಇರುವುದಿಲ್ಲ. ಆಗಾಗ ಇಂತಹ ಪರಿಸ್ಥಿತಿಗಳು ಬರುತ್ತವೆ. ಆದರೆ ಸರ್ಕಾರ ಉರುಳಲ್ಲಾ, ಇದು ಮಾಧ್ಯಮದ ಸೃಷ್ಟಿ ಅಷ್ಟೇ ಎಂದರು.
ಸರ್ಕಾರ ಇರಬೇಕು ಎಂಬ ಹಂಬಲ ಇದೆ. ಸಿಎಂ ಅವರು ಕೂಡ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಕೇವಲ ಮಾಧ್ಯಮಗಳು ಸರ್ಕಾರದ ರಚನೆ ಆಗಿದ್ದ ಸಂದರ್ಭದಿಂದಲೂ ಸುದ್ದಿ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಉರುಳುವುದಿಲ್ಲ. ಸರ್ಕಾರ ಇದ್ದರೆ ಕೆಲಸ ಮುಂದುವರಿಸುತ್ತೇನೆ. ಅಂದರೆ ಸರ್ಕಾರ ಹೋಗಲ್ಲ ಎಂಬುವುದು ನನ್ನ ಮಾತಿನ ಅರ್ಥ ಎಂದರು.
ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಮೈತ್ರಿ ಸರ್ಕಾರದ ವಲಯದಲ್ಲಿ ಮುಂದ್ಯಾರು ಎಂಬ ಚರ್ಚೆಗೆ ಆರಂಭಗೊಂಡಿದೆ. ಆನಂದ್ ರಾಜೀನಾಮೆ ಬೆನ್ನಲ್ಲೇ ಮನವೊಲಿಕೆಗೆ ಮುಂದಾಗಿರುವ ಮೈತ್ರಿ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಡಿಸಿಎಂ ಪರಮೇಶ್ವರ್ ಅವರು ಸಚಿವ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇತ್ತ ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್ ಅವರು, ಶಾಸಕರ ಮನವೊಲಿಸುವ ಕಾರ್ಯ ಮಾಡುತ್ತೇವೆ ಎಂದರು.