ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರು ಮಾಜಿ ಅಲ್ಲ. ನಮ್ಮ ಪಾಲಿಗೆ ಇಂದಿಗೂ ಅವರೇ ನಮ್ಮ ಸಿಎಂ. ಕೆಲವು ಲೆಕ್ಕಾಚಾರದಿಂದ ಸಿದ್ದರಾಮಯ್ಯನವರು ಸಿಎಂ ಆಗೋದು ತಪ್ಪಿದೆ. ಆದ್ರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಶಾಸಕ ಡಾ.ಸುಧಾಕರ್ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆ ಬಳಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸುಧಾಕರ್, ಒಬ್ಬರ ಮೇಲೆ ಅಪಪ್ರಚಾರ ಮಾಡೋದು ರಾಜಕಾರಣದಲ್ಲಿ ಸಾಮಾನ್ಯ. ಇಡೀ ಮಾಹಾಭಾರತವೇ ಮೋಸದಿಂದ ಕೂಡಿದೆ. ಮಹಾಭಾರತದಲ್ಲಿ ಧರ್ಮರಾಜನನ್ನು ಸೋಲಿಸಲು ಶಕುನಿ ಷಡ್ಯಂತ್ರ ಮಾಡಿದ. ಶಕುನಿ ಪಗಡೆಯಾಟದ ಮೂಲಕ ಧರ್ಮರಾಜನನ್ನು ಸೋಲಿಸಿದ. ಈ ಕಲಿಯುಗದಲ್ಲಿಯೂ ಅದೇ ಪಗಡೆಯಾಟದಲ್ಲಿ ನಮ್ಮ ಧರ್ಮರಾಜ ಸಿದ್ದರಾಮಯ್ಯನವರನ್ನು ಸೋಲಿಸಲಾಯ್ತು. ಕೆಲವರ ಅಪಪ್ರಚಾರದಿಂದ ಸಿದ್ದರಾಮಯ್ಯನವರು ಸಿಎಂ ಆಗೋದು ತಪ್ಪಿದೆ. ಕೆಲವರು ತಮ್ಮ ಮೋಸದಾಟದಿಂದ, ಅಧರ್ಮವಾಗಿ ಗೆಲುವು ಸಾಧಿಸಿದರು. ಅಂತಿಮ ವಿಜಯ ನಮ್ಮದೇ ಎಂಬ ಕಲ್ಪನೆ ಗೆದ್ದವರಿಗೆ ಇರಲಿ ಎಂದು ವಿರೋಧಿಗಳ ವಿರುದ್ಧ ಗುಡುಗಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಮ್ಮ ದೇಶದಲ್ಲಿ ಇರುವಷ್ಟು ಜಾತಿ ಮತ್ತು ದೇವರುಗಳು ಬೇರಲ್ಲೂ ಇಲ್ಲ. ದೇವರನ್ನು ನಂಬಿ ಆದ್ರೆ ಡಾಂಭಿಕತನ ಮಾಡೋದು ಬೇಡ. ಜಾತಿ ಮಾಡುವಂತಹ ಸ್ವಾರ್ಥಿಗಳು ಮನುಷ್ಯರು, ನನ್ನ ಅಧಿಕಾರವಧಿಯಲ್ಲಿ ಎಲ್ಲಾ ಜಾತಿಯವರ ಪರವಾಗಿ ನಾನು ಕೆಲಸ ಮಾಡಿದೆ. ಆದ್ರೆ ಆ ಜಾತಿಗಳಿಂದಲೇ ನನ್ನನ್ನು ಜನರು ಸೋಲಿಸಿದರು. ಅಧಿಕಾರದಲ್ಲಿ ಯಾರಿಗೆ ಕೆಲಸ ಮಾಡಿಕೊಟ್ಟೆ ಅವರೇ ನನ್ನ ಕೈ ಹಿಡಿಯಲಿಲ್ಲ. ಚುನಾವಣೆ ವೇಳೆ ಸಿದ್ದರಾಮಯ್ಯ ಒಕ್ಕಲಿಗ, ಲಿಂಗಾಯಿತ ವಿರೋಧಿ, ಸಾಬರ ಪರ ಅಂತ ಅಪಪ್ರಚಾರ ಮಾಡಿದ್ರು. ಹೀಗಾಗಿ ಎಲ್ಲಾ ಸೇರಿಕೊಂಡು ನನ್ನನ್ನು ಸೋಲಿಸಲಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ಯಾವ ಶಾಸಕರನ್ನು ಕಡೆಗಣಿಸಿಲ್ಲ. ಎಲ್ಲ ಶಾಸಕರು ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಮೈತ್ರಿ ಉರುಳಿಸಲು ಬಿಜೆಪಿ ಮೊದಲಿನಿಂದಲೂ ಪ್ರಯತ್ನ ಮಾಡುತ್ತಿದೆ. ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದಿದ್ದನ್ನು ಸ್ವಾಗತಿಸುತ್ತೇವೆ. ಪ್ರಿಯಾಂಕಾ ಅವರ ಪ್ರವೇಶದಿಂದ ಉತ್ತರ ಪ್ರದೇಶದಲ್ಲಿ ಬದಲಾವಣೆ ಬೀಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv