ಕಲಬುರಗಿ: ಕೊರೊನಾ ಸೋಂಕು ವಿರುದ್ಧ ಹೋರಾಟಕ್ಕೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸಿ ಭಾರತ ದೇಶ ಕೊರೊನಾ ವಿರುದ್ಧ ಹೋರಾಡಲು ಒಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಎಂದು ಕರೆ ನೀಡಿದ್ದಾರೆ. ಇದಕ್ಕೆ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರ ಪುತ್ರಿ ಅವಣಿ ಸಹ ಬೆಂಬಲ ವ್ಯಕ್ತಪಡಿಸಿ ಮನವಿಯೊಂದನ್ನು ಮಾಡಿಕೊಂಡಿದ್ದಾಳೆ.
ಮನೆಯಲ್ಲಿಯೇ ಕುಳಿತು ಎಲ್ಲರು ದೀಪ ಬೆಳಗಿಸಿ, ಒಗಟ್ಟಿನ ಬಲವಿದೆ ಎಂಬುದು ತೋರಿಸಿ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಲಕ್ಷ್ಮಣ ರೇಖೆ ದಾಟಿ ದೀಪ ಬೆಳಗಿಸಲು ಹೋಗಬೇಡಿ. ಪ್ರಧಾನಿ ಮೋದಿ ಅವರ ಕರೆಗೆ ನಾನು ಕೈಜೊಡಿಸುತ್ತೇನೆ. ನೀವು ನಮ್ಮೊಡನೆ ಸಾಥ್ ನೀಡಿ ಎಂದು ಅವಣಿ ವಿಡಿಯೋ ಮೂಲಕ ಸಂದೇಶ ನೀಡಿದ್ದಾಳೆ. ಶಾಸಕರ ಪುತ್ರಿಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಬಾಲಕಿ ಮನವಿಗೆ ಹಲವು ನೆಟ್ಟಿಗರು ಪತ್ರಿಯಿಸಿದ್ದಾರೆ.
ಕೊರೊನಾ ಲಾಕ್ಡೌನ್ ಪರಿಣಾಮ ನಿರ್ಗತಿಕ ಮತ್ತು ಪಾಲಿಕೆ ಪೌರ ಕಾರ್ಮಿಕರಿರು ಊಟ ಸಿಗದೇ ಪರದಾಡುತ್ತಿದ್ದಾಗ ದತ್ತಾತ್ರೇಯ ಪಾಟೀಲ್ ಅವರು ಸಹಾಯ ಹಸ್ತ ಚಾಚಿದ್ದರು. ಪಾಲಿಕೆ ಅಧಿಕಾರಿಗಳ ಮುಖಾಂತರ ಎಲ್ಲಾ ನಿರ್ಗತಿಕ ಹಾಗೂ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಅಷ್ಟೇ ಅಲ್ಲದೆ ಖುದ್ದು ಶಾಸಕರೇ ಪೌರ ಕಾರ್ಮಿಕರಿಗೆ ಊಟ ಬಡಿಸಿ ಯೋಜನೆಗೆ ಚಾಲನೆ ನೀಡಿದ್ದರು.
ಅದಲ್ಲದೇ ಪಾಲಿಕೆಯ ಎಲ್ಲಾ 55 ವಾರ್ಡ್ಗಳಲ್ಲಿ ಸಹ ತರಕಾರಿಯನ್ನು ಮನೆ ಮನೆಗೆ ಕಳುಹಿಸುವ ಯೋಜನೆಗೂ ಸಹ ಚಾಲನೆ ನೀಡಿದ್ದರು. ಹೀಗಾಗಿ ಸಾರ್ವಜನಿಕರು ಯಾರು ಸಹ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕು. ಈ ಮೂಲಕ ಕೊರೊನಾ ಸೋಂಕು ತಡೆಯಲು ಎಲ್ಲರು ಸಹ ಕೈ ಜೋಡಿಸಬೇಕು ಎಂದು ದತ್ತಾತ್ರೇಯ ಪಾಟೀಲ್ ಮನವಿ ಮಾಡಿಕೊಂಡಿದ್ದರು.