ಕಲಬುರಗಿ: ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಹಸಿದವರು ಮತ್ತು ಹಳಸಿದವರ ಸಂಬಂಧವಾಗಿದೆ ಅಂತಾ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಗೇಲಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನರ ಸಂಕಷ್ಟ ಬಗೆಹರಿಯಲು ಸಾಧ್ಯನೇ ಇಲ್ಲ. ಇದು ಪವಿತ್ರವಾದ ಮದುವೆಯಲ್ಲ. ನಮ್ಮ ಕಡೆ ಮದುವೆ ಮಾಡಬೇಕಾದರೆ ಗುಣ ಮತ್ತು ಜಾತಕ ನೋಡುತ್ತಾರೆ. ಒಂದು ವೇಳೆ ಹತ್ತುಗುಣ ಹೊಂದಾಣಿಕೆಯಾದ್ರೆ ಮಾತ್ರ ಮದುವೆ ಮಾಡುತ್ತಾರೆ. ಆದರೆ ಇಲ್ಲಿ ಯಾವುದೇ ರೀತಿಯ ಜಾತಕ ನೋಡದೇ ಮಾಡಿಸಿದ ಸಂಬಂಧ. ಇದು ಲವ್ ಮ್ಯಾರೇಜ್ ಕೂಡು ಇಲ್ಲ, ಅರೆಂಜ್ ಮ್ಯಾರೇಜ್ ಅಲ್ಲ. ಇದೊಂದು ಲಿವಿಂಗ್ ಟುಗೇದರ್ ಸಂಬಂಧ ಎಂದು ವ್ಯಂಗ್ಯ ವಾಡಿದ್ದಾರೆ.
ಹಳಸಿದವರು ಜೆಡಿಎಸ್ ನವರು, ಹಸಿದವರು ಕಾಂಗ್ರೆಸ್ ನವರು ಇಬ್ಬರು ಸೇರಿ ಸರ್ಕಾರ ಮಾಡಿದ್ದಾರೆ. ಇದು ಕೂಡಿ ಮಾಡಿಸಿರುವ ಸಂಬಂಧ ಇದು ಎಷ್ಟು ದಿನ ಇರುತ್ತೆ ಅಂತಾ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಿಗೆ ಯಾರಿಗೂ ಗೊತ್ತಿಲ್ಲ. ಕೇವಲ ಬಿಜೆಪಿ ಅಧಿಕಾರ ಬರುತ್ತದೆ ಎಂದು ಇವರಿಬ್ಬರು ಲಿವಿಂಗ್ ಟುಗೇದರ್ ಮಾಡಿಕೊಂಡಿದ್ದಾರೆ. ಸಚಿವ ಸ್ಥಾನ ಹಂಚಿಕೆಯಾಗುವ ಮೊದಲೇ ಒಬ್ಬರಿಗೆ ಆಕ್ರೋಶ, ಸಿಟ್ಟು, ಹತಾಶೆ ಮತ್ತು ನೋವು ಬರುತ್ತಿದೆ. ಈ ಸರ್ಕಾರದ ಪತನದ ಸಂಪುಟ ರಚನೆಯ ದಿನದಿಂದನೇ ಆರಂಭವಾಗುತ್ತದೆ ಎಂದರು.
ಇವರಿಬ್ಬರ ಮೈತ್ರಿಯಿಂದ ರಾಜಕೀಯಕ್ಕೆ ಏನು ಅನುಕೂಲವಾಗದು. ಈ ಮೈತ್ರಿಯಿಂದ ಈಗಾಗಲೇ ಹಲವು ಕಾಂಗ್ರೆಸ್ ಹಿರಿಯ ನಾಯಕರು ತೀವ್ರ ಅಸಮಾಧನಾಗೊಂಡಿದ್ದಾರೆ. ಹೀಗಾಗಿ ರಾಜ್ಯದ ಜನರಿಗೆ ಸರ್ಕಾರದಿಂದ ಏನು ಉಪಯೋಗವಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.