ಮಂಡ್ಯ: ಭಾರತ ಸರ್ಕಾರದ ಬಲ್ಬನ್ನು ರಮ್ಯಾ ಕೈಯಲ್ಲಿ ಹಿಡಿಸಿ ಪಕ್ಕದಲ್ಲಿ ಡಿಕೆ ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.
ಮಂಡ್ಯ ಜಿಲ್ಲೆಯ, ನಾಗಮಂಗಲದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ತನ್ನದೆಂದು ಹೇಳುತ್ತಿದೆ. ಬೇರೆಯವರ ಮಕ್ಕಳನ್ನು ತನ್ನ ಮಕ್ಕಳೆಂದರೆ ಅವರ ಅಪ್ಪ ಅಮ್ಮ ಹಿಡಿದುಕೊಂಡು ಹೊಡೆಯುತ್ತಾರೆ ಅಂದ್ರು.
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 32 ರೂಪಾಯಿಗೆ ಅಕ್ಕಿ ಖರೀದಿ ಮಾಡಿ 3 ರೂಪಾಯಿಗೆ ರಾಜ್ಯಕ್ಕೆ ಕೊಡುತ್ತೆ. 29 ರೂಪಾಯಿ ಕೇಂದ್ರ ಸರ್ಕಾರದ ಮೋದಿಯವರದು. ಆದ್ರೆ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿಕೊಂಡು ಅನ್ನಭಾಗ್ಯ ಯೋಜನೆ ತಮ್ಮದೆಂದು ಹೇಳುತ್ತಾರೆ ಅಂತ ಕಿಡಿಕಾರಿದ್ರು.
ಎಲ್ಇಡಿ ಬಲ್ಬ್ ಕೊಡುವುದು ಕೇಂದ್ರದ ಪ್ರಕಾಶ್ ಪಥ್ ಯೋಜನೆ. ಈಗಲೂ ಬಲ್ಬ್ನಲ್ಲಿ ಭಾರತ ಸರ್ಕಾರ ಅಂತಾನೆ ಇದೆ. ಆದ್ರೆ ಹೊರಗೆ ಕವರ್ ಚೇಂಜ್ ಮಾಡಿ ರಮ್ಯಾ ಕೈಯಲ್ಲಿ ಬಲ್ಬನ್ನು ಹಿಡಿಸಿ ಪಕ್ಕದಲ್ಲಿ ಡಿಕೆ.ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ. ಅದೇ ರೀತಿ ಕೇಂದ್ರ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಹೇಳುತ್ತಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅಂತ ಹೇಳಿದ್ರು.
ಎಲ್ಲರಿಗಿಂತ ಹೆಚ್ಚು ಸಾಲ ಮಾಡಿದ ಸಿದ್ದರಾಮಯ್ಯ ಯಾವ ಕೆಲಸವೂ ಮಾಡದೇ ಕಳ್ಳಬಿಲ್ಲು ಸುಳ್ಳು ಲೆಕ್ಕಕ್ಕೆ ಸಾಲ ಮಾಡುತ್ತಿದ್ದಾರೆ. ದುಡ್ಡು ಹೊಡೆಯಲು ರಾಜ್ಯ ಸರ್ಕಾರದಲ್ಲಿ ನಾಲ್ಕೈದು ಜನ ಸಚಿವರಿದ್ದಾರೆ ಎಂದು ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.