ಸಮಾಧಾನವೇ ಆಗಿಲ್ಲ, ಅಸಮಾಧಾನ ಮಾತು ಎಲ್ಲಿಂದ ಬಂತು – ಕುತೂಹಲ ಮೂಡಿಸಿದ ಬಿಸಿ ಪಾಟೀಲ್ ಹೇಳಿಕೆ

Public TV
1 Min Read
bc patil

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಕೆಲ ಶಾಸಕರ ನಡೆ ಕುತೂಹಲ ಮೂಡಿಸಿದೆ. ಇದರ ಬೆನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶಾಸಕ ಬಿಸಿ ಪಾಟೀಲ್ ತಮಗೇ ಸರ್ಕಾರದಲ್ಲಿ ಸಮಾಧಾನವೇ ಆಗಿಲ್ಲ, ಇನ್ನು ಅಸಮಾಧಾನ ಮಾತು ಎಂದು ಹೇಳಿ ಹಲವು ಅನುಮಾನಗಳಿಗೆ ಕಾರಣರಾದರು.

ಬೆಂಗಳೂರಿನ ನಿವಾಸದಲ್ಲೇ ಇರುವ ಶಾಸಕ ಬಿಸಿ ಪಾಟೀಲ್ ಅವರು, ಸರ್ಕಾರದ ವಿರುದ್ಧ ನನಗೆ ಅಸಮಾಧಾನ ಅನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ನನಗೆ ಸಮಾಧಾನವೇ ಆಗಿಲ್ಲ. ನನಗೆ ಸಚಿವ ಸ್ಥಾನ ನೀಡದ ಬಗ್ಗೆ ಅಸಮಾಧಾನ ಇದ್ದೇ ಇದೆ. ಜಿಲ್ಲೆಯಲ್ಲಿ ಏಕೈಕ ಶಾಸಕನಾಗಿ ಆಯ್ಕೆ ಆಗಿದ್ದರೂ ಕೂಡ ಮಂತ್ರಿ ಸ್ಥಾನ ನೀಡಿಲ್ಲ ಎಂದರು. ಅಲ್ಲದೇ ರಮೇಶ್ ಜಾರಕಿಹೊಳಿ ಅವರನ್ನು ನಾನು ಈಗ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Siddaramaiah

ಇದೇ ವೇಳೆ ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾನು ಸನ್ಯಾಸಿಯಲ್ಲ ನನ್ನೂರಿನ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಜನ ಏನು ಹೇಳುತ್ತಾರೆ ಅದನ್ನು ಕೇಳೋಣ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.

ಚುನಾವಣೆ ಆದ ಬಳಿಕ ಆತ್ಮಾವಾಲೋಕನ ನಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ ಆದರೆ ಎಲ್ಲವೂ ಸರಿ ಹೋಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದರು ಸಿಎಂ ಆಗಬಹುದು. ನಾನು ಕೂಡ ಸಿಎಂ ಆಗಬಹುದು. ಸಿದ್ದರಾಮಯ್ಯ ಮಗದೊಮ್ಮೆ ಸಿಎಂ ಆಗಬಹುದು, ಸರ್ಕಾರ ಹೀಗೆ ಉಳಿಯಲಿದೆ ಎನ್ನುವ ಆಶಾಭಾವನೆ ಇದೆ. ಈ ಹಿಂದೆ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಕೈ ಹಾಕಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಕಾರಣವಾಯಿತು. ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ಗೆಲ್ಲಬೇಕಾಗಿತ್ತು. ಅವರು ನಮ್ಮ ಹೆಮ್ಮೆ. ದೇವೇಗೌಡರು, ಖರ್ಗೆ ಸೋತಿದ್ದು ನೋವಾಯಿತು. ಮಂಡ್ಯ ವಿಚಾರದಲ್ಲಿ ನಾನು ಏನು ಹೇಳಲು ಆಗುವುದಿಲ್ಲ. ಗೆದ್ದವರಿಗೆ ಶುಭಾಶಯ ಹೇಳುತ್ತೇನೆ ಅಷ್ಟೇ ಎಂದರು. ಚುನಾವಣೆಯಲ್ಲಿ ದುಡ್ಡು, ಜಾತಿ ನಡೆಯಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎನ್ನುವುದಕ್ಕಿಂತ ಜನರು ಇಲ್ಲಿ ಈ ಸಂದೇಶವನ್ನು ಸಿಎಂಗೆ ಕೊಟ್ಟಿದ್ದಾರೆ ಎಂದು ಟಾಂಗ್ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *