ಮಂಗಳೂರು: ಕರಾವಳಿಯಲ್ಲಿ ಕಾಂಗ್ರೆಸ್ನ ಭಿನ್ನಮತ ಶಮನವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮುಂದೆಯೇ ಪಕ್ಷದ ಸಚೇತಕ ಐವಾನ್ ಡಿಸೋಜ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ವಾಗ್ವಾದ ನಡೆಸಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿಗೆ ಭೇಟಿ ನೀಡುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ವೇಳೆ ಸಿದ್ದರಾಮಯ್ಯನವರನ್ನು ಸ್ವಾಗತಿಸಲು ಐವಾನ್ ಡಿಸೋಜಾ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಬೆಂಬಲಿಗರು ಬಂದಿದ್ರು.
ಆದರೆ ಐವನ್ ಬೆಂಬಲಿಗರು ಭಿತ್ತಿಪತ್ರ ಹಿಡಿದು ಜಯಕಾರ ಕೂಗಿದ್ದನ್ನು ಶಾಸಕ ಅಭಯಚಂದ್ರ ಜೈನ್ ಆಕ್ಷೇಪಿಸಿದ್ದಾರೆ. ಈ ವೇಳೆ, ಉಭಯ ನಾಯಕರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಆ ಬಳಿಕ ಸಿಎಂ ಸಿದ್ದರಾಮಯ್ಯ ಆಗಮಿಸಿದಾಗ ಸ್ವತಃ ಶಾಸಕ ಅಭಯಚಂದ್ರ ಜೈನ್, ಮುಖ್ಯ ಸಚೇತಕ ಐವನ್ ಡಿಸೋಜರನ್ನು ದುರುಗುಟ್ಟಿದ್ದಲ್ಲದೆ ಕೈಯಿಂದ ಎಳೆದಾಡಿದ ಘಟನೆ ನಡೆಯಿತು.
ಐವನ್ ಡಿಸೋಜ ಅವರು ಸಿಎಂ ಹತ್ತಿರ ಹೋಗದಂತೆ ಜೈನ್ ಬೆಂಬಲಿಗರು ತಳ್ಳಿದ ವಿದ್ಯಮಾನ ಸಿಎಂ ಸಮ್ಮುಖದಲ್ಲಿಯೆ ನಡೆದಿದ್ದು ಭಿನ್ನಮತಕ್ಕೆ ಸಾಕ್ಷಿಯಾಯ್ತು. ಇದ್ರಿಂದ ಸಿಎಂ ಸಿದ್ದರಾಮಯ್ಯ ತೀವ್ರ ಮುಜುಗರಕ್ಕೊಳಗಾದ್ರು. ಈಗಾಗ್ಲೆ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಐವನ್ ಡಿಸೋಜ ಕಸರತ್ತು ಆರಂಭಿಸಿದ್ದು ಇದೇ ವೇಳೆ ಇಂತಹ ಘಟನೆ ನಡೆದಿರುವುದು ಹೊಸ ರಾಜಕೀಯ ಸ್ವರೂಪ ಪಡೆಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುಮಾರು 252.50 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ್ದರು. ಮಿನಿ ವಿಧಾನಸೌಧ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 100 ಹಾಸಿಗೆಗಳ ಹೊಸ ಆಸ್ಪತ್ರೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ.