ಹುಬ್ಬಳ್ಳಿ: ದೇಶದೆಲ್ಲೆಡೆ ಇಂದು 75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನ ಸಂಭ್ರಮ ಮನೆ ಮಾಡಿದೆ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದಲ್ಲಿ ಧ್ವಜಾರೋಹಣದ ವೇಳೆ ಎರಡು ಪ್ರತ್ಯೇಕ ಸ್ಥಳದಲ್ಲಿ ಎಡವಟ್ಟಾದ ಪರಿಣಾಮ, ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ.
ಮೊದಲಿಗೆ ಮುಕ್ಕಲ್ಲ ಸರ್ಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಶಾಲಾ ಅಧ್ಯಕ್ಷ ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಿಂಗರೆಡ್ಡಿ, ಮೊದಲಿಗೆ ಉಲ್ಟಾ ಧ್ವಜ ಹಾರಿಸಿದ್ದು, ಬಳಿಕ ಧ್ವಜ ಕೆಳಗಿಳಿಸಿ ಮತ್ತೆ ಸರಿಯಾಗಿ ಧ್ವಜಾರೋಹಣ ಮಾಡಿದರು. ಇದನ್ನೂ ಓದಿ: ಧ್ವಜಾರೋಹಣದ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು, ಓರ್ವನಿಗೆ ಗಾಯ
ಇನ್ನೂ ಎರಡನೇ ಘಟನೆ ನೆಹರು ಯುವಕ ಮಂಡಳಿ ಮುಂದೆ ನಡೆದಿದೆ. ಧ್ವಜಾರೋಹಣ ವೇಳೆ ಏಕಾಏಕಿ ಧ್ವಜ ಕಳಚಿ ಬಿದ್ದಿದೆ. ಈ ಧ್ವಜಾರೋಹಣವನ್ನು ಸಹ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರೆಡ್ಡಿ ಮಾಡಿದ್ದಾರೆ. ಈ ಘಟನೆಗೆ ಗ್ರಾಮದ ಪ್ರಜ್ಞಾವಂತ ನಾಗರಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಎಡವಟ್ಟಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ – ಯುವಕನಿಗೆ ಚಾಕು ಇರಿತ