ದಕ್ಷಿಣ ಕನ್ನಡ/ಉಡುಪಿ: ಫರಂಗಿಪೇಟೆಯಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿ 12 ದಿನಗಳ ಬಳಿಕ ಶನಿವಾರ ಉಡುಪಿಯಲ್ಲಿ (Udupi) ಪತ್ತೆಯಾಗಿದ್ದಾನೆ.
ಅಪ್ರಾಪ್ತ ವಿದ್ಯಾರ್ಥಿಯನ್ನು ದಿಗಂತ್ ಎಂದು ಗುರುತಿಸಲಾಗಿದ್ದು, ಫೆ.25 ರಂದು ಮಂಗಳೂರಿನ ಫರಂಗಿಪೇಟೆಯಿಂದ ನಾಪತ್ತೆಯಾಗಿದ್ದ. ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ತೆರಳಿದ್ದ ದಿಗಂತ್ ಮನೆಗೆ ವಾಪಸ್ಸಾಗಿರಲಿಲ್ಲ. ವಿದ್ಯಾರ್ಥಿಗಾಗಿ ದಕ್ಷಿಣ ಕನ್ನಡ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಕಳೆದ 10 ದಿನಗಳಿಂದ ಹುಡುಕಾಟ ನಡೆಸಿದ್ದರೂ ಕೂಡ ಪತ್ತೆಹಚ್ಚಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಬಾಲಕನ ಪತ್ತೆಗಾಗಿ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ: 75 ವರ್ಷವಾದರೂ ಕೃಷಿಯಲ್ಲಿ ಸಾಧನೆ – ಪುಟ್ಟಮ್ಮಗೆ ನಾರಿ ನಾರಾಯಣಿ ಪ್ರಶಸ್ತಿ
ಶನಿವಾರ ಉಡುಪಿಯ ಡಿ-ಮಾರ್ಟ್ನಲ್ಲಿ ದಿಗಂತ್ ಪತ್ತೆಯಾಗಿದ್ದು, ಅಲ್ಲಿ ಬಟ್ಟೆಗಳನ್ನು ಬ್ಯಾಗ್ಗೆ ತುಂಬಿಕೊಳ್ಳುತ್ತಿದ್ದಾಗ ಸಂಶಯಕ್ಕೊಳಗಾದ ಡಿ-ಮಾರ್ಟ್ ಸಿಬ್ಬಂದಿ ಆತನನ್ನು ಪ್ರಶ್ನಿಸಿದ್ದಾರೆ. ವಿಚಾರಣೆ ನಡೆಸಿದಾಗ ತಾನು ದಿಗಂತ್ ಎಂದು ಹೇಳಿಕೊಂಡಿದ್ದಾನೆ. ಇದೇ ವೇಳೆ ಸಿಬ್ಬಂದಿಯ ಮೊಬೈಲ್ನಿಂದ ತಾಯಿಗೆ ಕರೆ ಮಾಡಿದ್ದಾನೆ.
ಪ್ರಕರಣ ಸಂಬಂಧ ದಿಗಂತ್ ತಾಯಿ ಮಾತನಾಡಿ, ದಿಗಂತ್ ತಮಗೆ ಕರೆ ಮಾಡಿ, ತಾನು ಉಡುಪಿಯ ಡಿಮಾರ್ಟ್ನಲ್ಲಿದ್ದೇನೆಂದು ತಿಳಿಸಿದ್ದಾನೆ. ನನಗೇನು ತೊಂದರೆಯಾಗಿಲ್ಲ. ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ, ನಾನು ನಾಪತ್ತೆಯಾಗುವ ಹುಡುಗ ಅಲ್ಲ. ಎಲ್ಲವನ್ನೂ ಮನೆಗೆ ಬಂದು ಹೇಳುತ್ತೇನೆ ಎಂದಿದ್ದಾನೆ ಎಂದರು.
ದಿಗಂತ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ದಕ್ಷಿಣ ಕನ್ನಡ ಪೊಲೀಸರು ಉಡುಪಿಗೆ ತೆರಳಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಾಲಕನನ್ನು ಮಂಗಳೂರಿನ ಫರಂಗಿಪೇಟೆಯ ಆತನ ಮನೆಗೆ ತಲುಪಿಸಲಿದ್ದಾರೆ.ಇದನ್ನೂ ಓದಿ: ಧಾರವಾಡದ ಉಪ್ಪಿನಕಾಯಿ ಅಜ್ಜಿಗೆ ನಾರಿ ನಾರಾಯಣಿ ಗೌರವ