ಬಾಗಲಕೋಟೆ: ತಾಲೂಕಿನ ಕದಾಂಪುರ ಪುನರ್ ವಸತಿ ಕೇಂದ್ರದ ಮನೆಯ ಬಳಿ ಮೈದಾನದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಇಂದು ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ಗುರುವಾರ ಕದಾಂಪುರ ಗ್ರಾಮದ ಮನೆಯ ಬಳಿ ಆಟ ವಾಡುತ್ತಿರುವಾಗ ನೇಹಾ (9) ಹಾಗೂ ಸಹೋದರ ಆಕಾಶ್ (5) ಕಾಣೆಯಾಗಿದ್ದರು. ಸುದ್ದಿ ತಿಳಿದ ಮಕ್ಕಳ ಪೋಷಕರು, ಸ್ವ ಗ್ರಾಮ ಹಾಗೂ ತಮ್ಮ ಸಂಬಂಧಿಕರ ಊರುಗಳಲ್ಲೆಲ್ಲಾ ವಿಚಾರಿಸಿದರು. ಆದರೆ ಮಕ್ಕಳ ಸುಳಿವು ಸಿಗಲಿಲ್ಲ, ಹಾಗಾಗಿ ಆತಂಕಗೊಂಡ ಆಕಾಶ್ ಹಾಗೂ ನೇಹಾ ಪಾಲಕರು ಮಕ್ಕಳ ಅಪಹರಣವಾಗಿದೆ ಎಂದು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಾಪತ್ತೆ ಆಗಿದ್ದ ಮಕ್ಕಳು ಇಂದು ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ವಿಜಯಪುರಕ್ಕೆ ಹೋಗಿ ನಮ್ಮ ಮಕ್ಕಳನ್ನ ಕರೆದುಕೊಂಡು ಬರಲಿದ್ದೇವೆಂದು ಪಾಲಕರು ತಿಳಿಸಿದ್ದಾರೆ. ಮಕ್ಕಳನ್ನ ಯಾರೋ ಅಪಹರಣ ಮಾಡಿದ್ದರೆಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿ, ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.