ನವದೆಹಲಿ: ದಿಕ್ಕುತಪ್ಪಿಸುವ ವೈದ್ಯಕೀಯ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳದ ಕರ್ನಾಟಕ (Karnataka) ಸೇರಿ ಇತರೆ ರಾಜ್ಯ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಆಕ್ಷೇಪ ವ್ಯಕ್ತಪಡಿಸಿದೆ.
ಸಾರ್ವಜನಿಕರನ್ನು ದಾರಿತಪ್ಪಿಸುವಂತಹ ಸುಳ್ಳು ಹಾಗೂ ಪರಿಶೀಲಿಸದ ವೈದ್ಯಕೀಯ ಘೋಷಣೆಗಳನ್ನು ತಡೆಗಟ್ಟಲು ಔಷಧ ಮತ್ತು ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ – 1954 ಅನ್ನು ಅಕ್ಷರಶಃ ಜಾರಿಗೆ ತರಬೇಕು ಎಂದು ನ್ಯಾ.ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಸಂಬಂಧ ಸಮಗ್ರ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ.ಇದನ್ನೂ ಓದಿ: ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು
Advertisement
Advertisement
ರಾಜ್ಯ ಸರ್ಕಾರಗಳು ದೂರುಗಳನ್ನಷ್ಟೇ ಅವಲಂಬಿಸುವ ಬದಲು ಕಾಯಿದೆ ಜಾರಿಗೆ ಪೂರ್ವಭಾವಿ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾಯಿದೆಯ ಸೆಕ್ಷನ್ 170ರ ಅಡಿಯಲ್ಲಿ ಯಾವುದೇ ಜಾಹೀರಾತುಗಳನ್ನು ರಾಜ್ಯದಲ್ಲಿ ಪ್ರಕಟಿಸಲಾಗಿಲ್ಲ ಎಂದ ಜಾರ್ಖಂಡ್ ಸರ್ಕಾರವನ್ನು ಇದೇ ವೇಳೆ ನಿರ್ದಿಷ್ಟವಾಗಿ ಪ್ರಶ್ನಿಸಿತು.
Advertisement
ಸೆಕ್ಷನ್ 170ರ ಅಡಿಯಲ್ಲಿ ಯಾವುದೇ ಔಷಧ ತಯಾರಕರು ಅನುಮತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಜಾರ್ಖಂಡ್ ಸಮರ್ಥಿಸಿಕೊಂಡಿದೆ. ಆದರೆ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆಯೇ ಎಂಬ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ಪೀಠ ನುಡಿದಿದೆ. ಅಂತೆಯೇ ನಿಯಮ 170ರ ಉಪಸೆಕ್ಷನ್ 2 ಮತ್ತು 3ರ ಅಡಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತಿದೆಯೇ ಎಂಬುದನ್ನು ಗಮನಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿತು.
Advertisement
ಕಾಯಿದೆ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಪೂರ್ವಭಾವಿ ಕ್ರಮ ಕೈಗೊಳ್ಳದ ಕರ್ನಾಟಕ ಸರ್ಕಾರದ ವಿರುದ್ಧ ಕೂಡ ನ್ಯಾಯಾಲಯ ಅಸಮಾಧಾನ ಹೊರಹಾಕಿತು. ರಾಜ್ಯ ಸರ್ಕಾರದ ಬಳಿ ತನ್ನದೇ ಆದ ಪೊಲೀಸ್ ವ್ಯವಸ್ಥೆ ಮತ್ತು ಸೈಬರ್ ವಿಭಾಗ ಇದ್ದು, ಅಂತಹ ಜಾಹೀರಾತುಗಳ ಮೂಲ ಪತ್ತೆ ಹಚ್ಚುವುದು ತುಂಬಾ ಸುಲಭ ಎಂದಿದೆ. ನಿಯಮ ಉಲ್ಲಂಘಿಸುವವರ ಹೆಸರು ಮತ್ತು ವಿಳಾಸಗಳನ್ನು ಪತ್ತೆ ಹಚ್ಚಿ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಯಿತು.
ಕಾಯಿದೆ ಜಾರಿಗೆ ಸಂಬಂಧಿಸಿದಂತೆ ಕೇರಳ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದ ಅಮಿಕಸ್ ಕ್ಯೂರಿ ಹಿರಿಯ ವಕೀಲ ಶಾದನ್ ಫರಾಸತ್, ಪಂಜಾಬ್, ಮಧ್ಯಪ್ರದೇಶ ಸರ್ಕಾರಗಳು ಇತ್ತೀಚಿಗೆ ಅಫಿಡವಿಟ್ ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಬೇಕಿದೆ. ನೋಟಿಸ್ ಬಳಿಕ ಪುದುಚೇರಿ ಸರ್ಕಾರ ಕೂಡ ಅಫಿಡವಿಟ್ ಸಲ್ಲಿಸಿದೆ. ಆಂಧ್ರಪ್ರದೇಶ ಅಫಿಡವಿಟ್ ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ಅನುಪಾಲನಾ ಅಫಿಡವಿಟ್ನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ತಿಳಿಸಿದೆ. ದಿಕ್ಕು ತಪ್ಪಿಸುವ ಜಾಹೀರಾತು ತಡೆಗೆ ಪರಿಣಾಮಕಾರಿ ನಿರ್ಣಯ ಮತ್ತು ಕಾಯಿದೆಯನ್ನು ಜಾರಿಗೆ ತರಲು ಹೆಚ್ಚಿನ ಕ್ರಮ ಕೈಗೊಳ್ಳುವ ಕುರಿತು ಮುಂದಿನ ವಿಚಾರಣೆ ವೇಳೆ ಪರಿಗಣಿಸುವುದಾಗಿ ಹೇಳಿದೆ. ಈ ಸಂಬಂಧ ಕಾಯಿದೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಟಿಪ್ಪಣಿ ಸಲ್ಲಿಸುವಂತೆ ನ್ಯಾಯಾಲಯ ಅಮಿಕಸ್ ಕ್ಯೂರಿ ಅವರಿಗೆ ನಿರ್ದೇಶಿಸಿದೆ.ಇದನ್ನೂ ಓದಿ: ಜಾಗರಣೆ ಮಾಡಿದ್ದಕ್ಕೆ ಶಿವರಾತ್ರಿ ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ಕೊಡಿ: ಸರ್ಕಾರಕ್ಕೆ ಮನವಿ