ಬೆಂಗಳೂರು: ರಸ್ತೆಯಲ್ಲಿ ಕಾರು ಅಡ್ಡವಾಗಿ ನಿಲ್ಲಿಸಿದ್ದರು ಅನ್ನೋ ಕಾರಣಕ್ಕೆ ಮನೆಗೆ ನುಗ್ಗಿ ಮೂವರಿಗೆ ಡ್ರ್ಯಾಗರ್ನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ಶಿಲ್ಪಾ, ಅರ್ಜುನ್, ದೀಪಕ್ ಗಾಯಗೊಂಡ ವ್ಯಕ್ತಿಗಳು. ಭಾನುವಾರ ರಾತ್ರಿ ಅರ್ಜುನ್ ಎಂಬವರು ಬಾಡಿಗೆ ಕಾರೊಂದರಲ್ಲಿ ಮನೆಯ ಬಳಿ ಬಂದು ಇಳಿದು ಕಾರ್ ಡ್ರೈವರ್ಗೆ ಬಾಡಿಗೆ ಹಣ ನೀಡುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರು ತೆಗೆಯುವಂತೆ ಅವಾಜ್ ಹಾಕಿದ್ದರು ಎಂದು ಹೇಳಲಾಗಿದೆ.
ಈ ವೇಳೆ ಅರ್ಜುನ್ ಹಣ ನೀಡಿ ಹೋಗುತ್ತೀನಿ. ನಾನು ಇದೇ ಏರಿಯಾದವನೇ ಎಂದು ಹೇಳಿ ಮನೆಯ ಒಳಗೆ ಹೋಗಿದ್ದಾರೆ. ಇದಾದ ಸ್ವಲ್ಪ ಹೊತ್ತಲ್ಲೇ ಏಕಾಏಕಿ ಅರ್ಜುನ್ ಮನೆಗೆ ನುಗ್ಗಿದ ಇಬ್ಬರು, ಡ್ರ್ಯಾಗರ್ನಿಂದ ಮೂವರಿಗೆ ಇರಿದು ಹಲ್ಲೆ ನಡೆಸಿದ್ದಾರೆ. ಗಲಾಟೆ ಶಬ್ಧ ಕೇಳಿದ ಅಕ್ಕಪಕ್ಕದ ಮನೆಯವರು ಇಬ್ಬರನ್ನು ಸೆರೆಹಿಡಿದು ರಾಜಾಜಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರೋ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.