ಬಳ್ಳಾರಿ: ಹೊಲದ ಬಾವಿಯಲ್ಲಿ ಬಿದ್ದಿದ್ದ ಕರಡಿಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಜೀವಂತವಾಗಿ ದಹನವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಡೇಕೊಳ್ಳದ ಬಳಿ ಜರಿಮಲೆ ಆರಣ್ಯದಲ್ಲಿ ನಡೆದಿದೆ.
ಆಹಾರ ಹುಡುಕಿಕೊಂಡು ಕರಡಿಯೊಂದು ಸಮೀಪದ ರೈತರ ವೀಳ್ಯದೆಲೆ ತೋಟಕ್ಕೆ ಭಾನುವಾರ ಮಧ್ಯಾಹ್ನ ಬಂದಿದೆ. ಈ ಸಂದರ್ಭದಲ್ಲಿ ಕರಡಿಯನ್ನು ನೋಡಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕೂಡ್ಲಿಗಿ ವಲಯ ಆರಣ್ಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಕರಡಿಯನ್ನು ಅರಣ್ಯಕ್ಕೆ ಓಡಿಸಿದ್ದಾರೆ.
ಆದರೆ ಕರಡಿ ಅರಣ್ಯಕ್ಕೆ ಹೋಗದೆ ಕಡೇಕೊಳ್ಳದ ಕಡೆ ಓಡಿ ಹೋಗಿ ಪಾಳು ಬಾವಿಯೊಂದರಲ್ಲಿ ಬಿದ್ದಿದೆ. ಇದನ್ನು ನೋಡಿದ ಯಾರೋ ಕಿಡಿಗೇಡಿಗಳು ಸಂಜೆ 6 ಗಂಟೆ ಸುಮಾರಿಗೆ ಬಾವಿಯಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ಹಚ್ಚಿಹೋಗಿದ್ದಾರೆ. ಪರಿಣಾಮ ಕರಡಿ ಬಾವಿಯಲ್ಲಿಯೇ ಸಜೀವ ದಹನವಾಗಿದೆ.
ವಿಷಯ ತಿಳಿದ ಗುಡೇಕೋಟೆ ವಲಯ ಉಪಅರಣ್ಯಾಧಿಕಾರಿಗಳಾದ ಪಿ. ಮಹೇಶ್, ಎಚ್. ವೆಂಕಟೇಶ್ ನಾಯ್ಕ್ ಅವರು ಕೂಡ್ಲಿಗಿ ಅಗ್ನಿ ಶಾಮಕ ಸಿಬ್ಬಂದಿ ಸಹಾಯದೊಂದಿಗೆ ಕರಡಿ ಮೃತ ದೇಹವನ್ನು ಮೇಲೆಕ್ಕೆತ್ತಿದ್ದಾರೆ.