ಮಡಿಕೇರಿ: ಶಾಲಾ ಮಕ್ಕಳು ಉಪಯೋಗಿಸುವ ನೀರಿನ ಟ್ಯಾಂಕ್ಗೆ ಕಿಡಿಗೇಡಿಗಳು ವಿಷ ಬೆರೆಸಿರುವ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಅದೃಷ್ಟವಶಾತ್ ನೀರಿನ ಬಳಕೆಗೆ ಮುಂಚಿತವಾಗಿ ಶೌಚಾಲಯ ಸ್ವಚ್ಛ ಮಾಡುವ ಆಯಾ ಎಂದಿನಂತೆ ನೀರು ಬಿಟ್ಟಿದ್ದಾರೆ. ಈ ವೇಳೆ ನೀರು ಕೆಟ್ಟ ವಾಸನೆ ಮತ್ತು ನೊರೆ ಬರುತ್ತಿರುವುದು ಗೊತ್ತಾಗಿದೆ. ಕೂಡಲೇ ಆಯಾ ಶಾಲೆಯ ಶಿಕ್ಷಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಸಿಂಟೆಕ್ಸ್ ಪರಿಶೀಲಿಸಿದಾಗ ಅದರಲ್ಲಿ ಯಾವುದೋ ವಿಷ ಮಿಶ್ರಣವಾಗಿರುವುದು ಗೊತ್ತಾಗಿದೆ. ಆತಂಕಗೊಂಡ ಶಿಕ್ಷಕರು ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಪಿನ್ ರಾವತ್ ಸ್ಥಿತಿ ಗಂಭೀರ – Mi-17 V5 ಹೆಲಿಕಾಪ್ಟರ್ ವಿಶೇಷತೆ ಏನು?
ಸ್ಥಳಕ್ಕೆ ಬಂದ ಪೊಲೀಸರು ಟ್ಯಾಂಕ್ ಪರಿಶೀಲಿಸಿದ ಬಳಿಕ ನೀರಿನ ಮಾದರಿಯನ್ನು ಸಂಗ್ರಹಿಸಿ ಎಫ್ಎಸ್ಎಲ್ ಪಲಿಶೀಲನೆಗೆ ಕಳುಹಿಸಿದ್ದಾರೆ. ಸದ್ಯ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಶಾಲೆಯ ಶಿಕ್ಷಕರು ದೂರು ನೀಡಿದ್ದು, ನೀರಿಗೆ ವಿಷ ಬೆರೆಸಿರುವ ಕ್ರಿಮಿಗಳಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಶಾಲೆಯಲ್ಲಿ ಅಡುಗೆ ಮತ್ತು ಕುಡಿಯುವುದಕ್ಕಾಗಿ ಇದೇ ನೀರು ಬಳಸುತ್ತಾರೆ, ಮಕ್ಕಳಿಗೆ ಸಮಸ್ಯೆ ಆಗಲಿ ಎಂದೇ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. ಒಂದು ವೇಳೆ ಅಡುಗೆ ಅಥವಾ ಕುಡಿಯುವುದಕ್ಕೆ ಈ ನೀರು ಬಳಸಿದ್ದರೆ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಮತ್ತು ಏಳನೇ ತರಗತಿವರೆಗೆ 185 ವಿದ್ಯಾರ್ಥಿಗಳಿದ್ದು ದೊಡ್ಡ ಅನಾವುತವೇ ಸಂಭವಿಸಿಬಿಡುತಿತ್ತು. ಆದರೆ ನಾವು ಆ ಸಿಂಟೆಕ್ಸ್ ನ ನೀರನ್ನು ಶೌಚಾಲಯಕ್ಕೆ ಹೊರತ್ತು ಪಡಿಸಿ ಬೇರೆ ಉದ್ದೇಶಕ್ಕೆ ಬಳಸುತ್ತಿರಲಿಲ್ಲ. ಹೀಗಾಗಿ ಆಗಬಹುದಾಗಿದ್ದ ಅನಾವುತ ತಪ್ಪಿ, ಕಿಡಿಗೇಡಿಗಳ ಉದ್ದೇಶ ಸಫಲವಾಗಿಲ್ಲ ಎಂದು ಶಾಲೆಯ ಶಿಕ್ಷಕಿ ಸೌಭಾಗ್ಯ ಪಬ್ಲಿಕ್ ಟಿವಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಶಾಲೆ ಮುಗಿಸಿ ಅತ್ತ ಹೋಗುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಶಾಲೆಯ ಹಿಂಭಾಗದಿಂದ ಶಾಲಾ ಆವರಣದೊಳಕ್ಕೆ ಬರುತ್ತಾರೆ. ಇಲ್ಲಿಯೇ ಮದ್ಯಪಾನ ಮಾಡುವುದು, ಗಾಂಜಾ ಸೇದುವುದದು ಮಾಡುತ್ತಾರೆ. ಈ ಹಿಂದೆಯೂ ಶಾಲೆಯ ಬೀಗ ಹೊಡೆದು ಪುಸ್ತಕಗಳನೆಲ್ಲ ಸುಟ್ಟ ಘಟನೆಗಳು ಇವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈಗ ಮತ್ತೆ ಇಂತಹ ಅಮಾನವೀಯ ಕೃತ್ಯ ಮಾಡಿದ್ದಾರೆ. ಶಾಲೆಗೆ ಸರಿಯಾದ ಭದ್ರತೆ ಕೊಡಬೇಕು ಎಂದು ಶಾಲೆಯ ದೈಹಿಕ ಶಿಕ್ಷಕ ನಂದಾ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಮಿಷಗಳ ಅಂತರದಲ್ಲಿ ಲ್ಯಾಂಡ್ ಆಗಬೇಕಿದ್ದ Mi-17V5 ಪತನ – 11 ಮಂದಿಯ ಮೃತದೇಹ ಪತ್ತೆ