ಚಿಕ್ಕಬಳ್ಳಾಪುರ: ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಹಲ್ಲೆ ಮಾಡಿ ಬಿಸಾಡಿದಲ್ಲದೇ ಆತನ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಂದವಾದ ಗ್ರಾಮದ ಬಳಿ ನಡೆದಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ಲೇಔಟ್ವೊಂದರಲ್ಲಿ ಅಪರಿಚಿತ ವ್ಯಕ್ತಿಯನ್ನು ಹಲ್ಲೆ ಮಾಡಿ ಎಸೆದಿದ್ದಾರೆ. ನಂತರ ಆತನ ಮೇಲೆ ಪದೇ ಪದೇ ವಾಹನವನ್ನು ಹತ್ತಿಸಿ ಚಿತ್ರ ವಿಚಿತ್ರವಾಗಿ ಕೊಲೆ ಮಾಡಿದ್ದಾರೆ.
ಇಡೀ ದೇಹದಲ್ಲಿ ಗಾಯದ ಗುರುತುಗಳಿದ್ದು ಮೃತ ವ್ಯಕ್ತಿಯ ಜೇಬಲ್ಲಿ ದ್ರಾಕ್ಷಿ ಕಟಾವು ಮಾಡುವ ಕತ್ತರಿ ಸಿಕ್ಕಿದೆ. ದೇಹ ಹಾಗೂ ದೇಹದ ಸುತ್ತಲೂ ವಾಹನ ಹತ್ತಿಸಿರುವ ಟೈರ್ನ ಗುರುತುಗಳಿದ್ದು, ಉದ್ದೇಶಪೂರ್ವಕವಾಗಿ ಯಾವುದೋ ವೈಷಮ್ಯದಿಂದ ವ್ಯಕ್ತಿಯ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗಿದೆ.
ಶ್ವಾನದಳದೊಂದಿಗೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.