ಬೆಂಗಳೂರು: ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಬಂದೂಕು ಕಸಿದು ಪರಾರಿಯಾಗಿರುವ ಘಟನೆ ನಗರದ ಕೋಡಿಗೆಹಳ್ಳಿಯ ಟಾಟಾ ನಗರದಲ್ಲಿ ನಡೆದಿದೆ.
ಕೋಡಿಗೆಹಳ್ಳಿ ಠಾಣೆಯ ಪೊಲೀಸ್ ಪೇದೆಗಳಾದ ಪರಮೇಶ್ ಹಾಗೂ ಸಿದ್ದಪ್ಪ ಮೇಲೆ ತಡರಾತ್ರಿ ಹಲ್ಲೆ ನಡೆದಿದೆ. ಡ್ಯಾಗರ್ ಹಾಗೂ ಕಬ್ಬಿಣದ ರಾಡಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಪರಮೇಶ್ ಅವರ ಕೈಗೆ ಗಾಯವಾಗಿದೆ.
5-6 ದುಷ್ಕರ್ಮಿಗಳು ಅನುಮಾನಾಸ್ಪದವಾಗಿ ನಡೆದುಕೊಂಡು ಹೋಗ್ತಾ ಇದ್ರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿಗಳು ಫಾಲೋ ಮಾಡಿಕೊಂಡು ಹೋಗಿದ್ದಾರೆ. ಪೊಲೀಸರನ್ನ ನೋಡಿ ದುಷ್ಕರ್ಮಿಗಳು ರಸ್ತೆ ಬದಿ ಅಡಗಿಕೊಂಡಿದ್ದಾರೆ. ಪೇದೆಗಳು ನೋಡಲು ಹೋದಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದಾಗ ಬಂದೂಕು ಕೆಳಗೆ ಬಿದ್ದಿದ್ದು, ತಕ್ಷಣ ಬಂದೂಕು ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈಶ್ಯಾನ ವಿಭಾಗದ ಡಿಸಿಪಿ ಎಸ್. ಗಿರೀಶ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಪರಿಚಿತರು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇಬ್ಬರು ಪೇದೆಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ನಾಲ್ವರು ಅನುಮಾಸ್ಪಾದಾವಾಗಿ ಓಡಾಡುತ್ತಿದ್ರು. ಪ್ರಶ್ನೆ ಮಾಡಿದಾಗ ಜಟಾಪಟಿ ನಡೆದಿದೆ. ಪೇದೆ ಹಿಂಬದಿಯಲ್ಲಿ ರೈಫಲ್ ಹಾಕಿಕೊಂಡಿದ್ದಾರೆ. ಪರಮೇಶ್ 303 ರೈಫಲ್ ಗಲಾಟೆ ವೇಳೆ ಕೆಳಗೆ ಬಿದ್ದಿದೆ. ಅದನ್ನು ಅಲ್ಲೇ ಬಿಟ್ರೆ ನಮ್ಮನ್ನು ಶೂಟ್ ಮಾಡುತ್ತಾರೆಂಬ ಭಯದಿಂದ ದುಷ್ಕರ್ಮಿಗಳು ಅದನ್ನು ತೆಗೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ರು.
ತಡರಾತ್ರಿ 1 ಗಂಟೆಗೆ ಸಾರ್ವಜನಿಕರು ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ನಮ್ಮ ಸಿಬ್ಬಂದಿ ಹೋಗಿದ್ದರು. ನಾಲ್ವರು ಕಳ್ಳತನ ಮಾಡಲು ಬಂದಿರುವುದಾಗಿದೆ ಮಾಹಿತಿ ಬಂದಿತ್ತು. ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಾಡಲಾಗುತ್ತದೆ. ರೈಫಲ್ ಕೂಡ ಆದಷ್ಟು ಬೇಗ ರಿಕವರಿ ಮಾಡುತ್ತೇವೆ ಎಂದು ಗಿರೀಶ್ ತಿಳಿಸಿದ್ರು.
ಘಟನೆ ಬಗ್ಗೆ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗ್ಳೂರಲ್ಲಿ ಪೊಲೀಸರ ಮೇಲೆಯೇ ರೌಡಿ ಹಲ್ಲೆ: ಲಾಂಗು-ಮಚ್ಚೇಟಿನಿಂದ ಪೇದೆಗೆ ಗಂಭೀರ ಗಾಯ