ಬೆಂಗಳೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ಇವರು ಚೇಲಾ ಅಂತಾರೆ, ಬಿ.ಎಲ್ ಸಂತೋಷ್ (BL Santhosh) ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ. ಪ್ರತಾಪ್ ಸಿಂಹ ಮೊದಲು ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ವೈಯಕ್ತಿಕ ಆಸಕ್ತಿ ತೆಗೆದುಕೊಂಡು ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ಸಂಸದರ ಒಂದು ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ಬಿ.ಎಲ್ ಸಂತೋಷ್ ಅವರನ್ನು ಟೀಕೆ ಮಾಡಿದ್ದೆ. ಆ ಟೀಕೆಯನ್ನು ಒಂದು ಸಮಾಜದತ್ತ ತೆಗೆದುಕೊಂಡು ಹೋಗಿದ್ರು. ಪ್ರತಿದಿನ ಎಂ.ಬಿ ಪಾಟೀಲ್ ಅವರು ಬ್ರಾಹ್ಮಣ ಸಮುದಾಯವನ್ನ ಟೀಕಿಸುವುದನ್ನ ನಿಲ್ಲಿಸಬೇಕು ಎಂದಿದ್ದಾರೆ. ಆದರೆ ಅವರು ಎಲ್ಲಿ ನೋಡಿದ್ದು ಗೊತ್ತಿಲ್ಲ. ಸಂತೋಷ್ ಟೀಕೆ ಮಾಡಿದರೆ ಬ್ರಾಹ್ಮಣರ ಟೀಕೆ ಅಲ್ಲಾ, ಎಂ.ಬಿ.ಪಾಟೀಲ್ ಟೀಕೆ ಮಾಡಿದರೆ ಲಿಂಗಾಯತರ ಟೀಕೆ ಅಲ್ಲಾ, ಡಿ.ಕೆ.ಶಿವಕುಮಾರ್ ಟೀಕೆ ಮಾಡಿದರೆ ಒಕ್ಕಲಿಗರ ಟೀಕೆ ಅಲ್ಲಾ ಎಂದರು.
ಸಿದ್ದರಾಮಯ್ಯ ಅವರು ಎಂ.ಬಿ ಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ. ಪ್ರತಾಪ್ ಸಿಂಹ ಉದ್ದೇಶ ಏನು ಎಂದು ಪ್ರಶ್ನಿಸು ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಸ ಎತ್ತಲ್ಲ, ಕೆಲಸ ಮಾಡಲ್ಲ – ಬಿಬಿಎಂಪಿಗೆ ಶಾಕ್ ಕೊಟ್ಟ ಬೆಂಗಳೂರು ಗುತ್ತಿಗೆದಾರರ ಸಂಘ
ಸಿದ್ದರಾಮಯ್ಯ (Siddaramaiah) ನಮ್ಮ ಹಿರಿಯ ನಾಯಕರು, ನಮ್ಮ ಜನಪ್ರಿಯ ನಾಯಕರು. ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು. ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾನು ಕಾಂಗ್ರೆಸ್ ನಲ್ಲಿ ಇರೋನು 1991 ರಲ್ಲಿಯೇ ನಾನು ಶಾಸಕನಾಗಿದ್ದೆ. ನಾನು ಯಾರ ಚೇಲಾ ಅಲ್ಲಾ ನಾನು ಕಾಂಗ್ರೆಸ್ ಪಕ್ಷದ ಚೇಲಾ ಇನ್ನೊಬ್ಬರ ಮೇಲೆ ಬಂದೂಕು ಇಟ್ಟು ಹೊಡೆಯುವಂತದ್ದು ಏನೂ ಇಲ್ಲ. ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ. ನಾವು ಬಿಜಾಪುರದವರು, ನಮಗೆ ಆ ತಾಕತ್ ಇದೆ ಎಂದು ಹೇಳಿದರು.