ಮುಂಬೈ: ದೀಪಾವಳಿ (Diwali) ಹಿನ್ನೆಲೆಯಲ್ಲಿ ಗಾಜಿನ ಪಟಾಕಿ (FireCracker) ಸಿಡಿಸಲು ಅನುಮತಿಸಿದ ಯುವಕನನ್ನು ಮೂವರು ಅಪ್ರಾಪ್ತರು ಸೇರಿ ಕೊಲೆ ಮಾಡಿರುವ ಘಟನೆ ಮುಂಬೈನ ಶಿವಾಜಿ ನಗರದ ನಟವರ್ ಪರೇಖ್ ಕಾಂಪೌಂಡ್ನಲ್ಲಿ ನಡೆದಿದೆ.
ಸುನೀಲ್ ಶಂಕರ್ ನಾಯ್ಡು (21) ಮೃತ ಯುವಕ. 12 ವರ್ಷದ ಬಾಲಕನು ಗಾಜಿನ ಬಾಟಲಿಯಲ್ಲಿ (Glass Bottle) ಪಟಾಕಿ ಸಿಡಿಸುತ್ತಿದ್ದನ್ನು ಸುನೀಲ್ ನೋಡಿದ್ದಾನೆ. ಇದಾದ ಬಳಿಕ ಆ ಬಾಲಕನ ಬಳಿ ಸುನೀಲ್ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದು ಬೇಡ ಅಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋಪಗೊಂಡ ಆ ಬಾಲಕ ಸುನೀಲ್ ವಿರುದ್ಧ ಹೋರಾಡಲು 14 ವರ್ಷದ ಸಹೋದರ ಹಾಗೂ 15 ವರ್ಷದ ಸ್ನೇಹಿತನನ್ನು ಕರೆತಂದಿದ್ದಾನೆ. ಮೊದಲಿಗೆ ನಾಲ್ವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಆ ಮೂವರು ಅಪ್ರಾಪ್ತರು ಸೇರಿ ಸುನೀಲ್ನನ್ನು ಥಳಿಸಿದ್ದಾರೆ. ಈ ವೇಳೆ ಒಬ್ಬಾತ ಸುನೀಲ್ ಕುತ್ತಿಗೆಗೆ ಚಾಕು ಇರಿದ್ದಾನೆ. ನಂತರ ಅಲ್ಲಿಂದ ಮೂವರು ಅಪ್ರಾಪ್ತರು ಪರಾರಿಯಾಗಿದ್ದಾರೆ.
ಈ ವೇಳೆ ಸುನೀಲ್ ಗಂಭೀರ ಗಾಯಗೊಂಡಿದ್ದ. ತಕ್ಷಣ ಸುನೀಲ್ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡುತ್ತಿರುವ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.