ಮಂಗಳೂರು: ರಾಜ್ಯ ಕರಾವಳಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಹಿಂದೂಪರ ಸಂಘಟನೆಗಳ ಆರೋಪದ ನಡುವೆಯೇ ಲವ್ ಜಿಹಾದ್ಗೆ ಪುಷ್ಟಿ ನೀಡುವ ಹಲವು ಘಟನೆಗಳು ವರದಿಯಾಗುತ್ತಿದೆ. ಇಂಥಹ ಘಟನೆಗಳ ಸಾಲಿಗೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಎಂಬಲ್ಲಿ ನಡೆದ ಘಟನೆಯೂ ಸೇರಿಕೊಂಡಿದೆ.
ಕಣಿಯೂರು ಮಸೀದಿಯ ಪಕ್ಕದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ದಂಪತಿಯ 14 ವರ್ಷದ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಅಪ್ರಾಪ್ತೆಯ ಸಾವಿಗೆ ಅನ್ಯಕೋಮಿನ ಯುವಕ ಕಾರಣ ಎಂದು ಬಾಲಕಿ ಪೋಷಕರು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬುರ್ಖಾ ಹಾಕಿ ಅಸಭ್ಯವಾಗಿ ವರ್ತಿಸಿದರೆ ಧರ್ಮದೇಟು – ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿ ಹೇರಿಕೆಗೆ ಯತ್ನ
ಬಾಲಕಿ ಕುಟಂಬ ಕಳೆದ 2 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ನಡುವೆ ಕಣಿಯೂರು ನಿವಾಸಿಯಾಗಿರುವ ಆರೋಪಿ ಶಾಹುಲ್ ಹಮೀದ್ ಬಾಲಕಿಯ ತಂದೆಯ ಜೊತೆ ಕೂಲಿ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯ ಕಡೆ ಬರುತ್ತಿದ್ದ. ಬಳಿಕ ಪೋಷಕರು ಇಲ್ಲದ ಸಂದರ್ಭ ಬಾಲಕಿಯನ್ನು ಕಾಣಲು ಬರುತ್ತಿದ್ದ ಆರೋಪಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ.
ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಸಾಹುಲ್ ಹಮೀದ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಬಾಲಕಿಯ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಂಡ ಶಾಹುಲ್ ಹಮೀದ್ ಆಕೆಯನ್ನು ಫೋನ್ ಮೂಲಕ ಸಂಪರ್ಕಿಸುತ್ತಿದ್ದ. ತನ್ನೊಂದಿಗೆ ಬರುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ. ಇದನ್ನೂ ಓದಿ: ನಿಮಗಿಂತ ಹೆಚ್ಚಾಗಿ ತನ್ನ ದೇಶವನ್ನು ಪ್ರೀತಿಸುತ್ತಾನೆ, ಮೋದಿಯನ್ನು ಟೀಕಿಸಿದ್ದ ಕಮ್ರಾಗೆ ತಿರುಗೇಟು ನೀಡಿದ ಬಾಲಕನ ತಂದೆ
ಆಕೆಯ ತಲೆ ಕೂದಲನ್ನು ಕೊಂಡೊಯ್ದು, ಬಳಿಕ ಭಸ್ಮ ಮಾದರಿಯ ವಸ್ತುವನ್ನು ಆಕೆಗೆ ತಿನ್ನಲು ನೀಡಿದ್ದ ಎನ್ನಲಾಗಿದೆ. ಹೀಗಾಗಿ ಇದು ಆತ್ಮಹತ್ಯೆಯಲ್ಲ ಇದೊಂದು ವ್ಯವಸ್ಥಿತವಾದ ಕೊಲೆ, ವಾಮಚಾರ ನಡೆಸಿ ಲವ್ ಜಿಹಾದ್ ಮಾಡಲಾಗಿದೆ ಎಂದು ಹಿಂದೂಪರ ಸಂಘಟನೆ ವಿಎಚ್ಪಿ ಆರೋಪಿಸಿದೆ.
ಆರೋಪಿ ಸಾಹುಲ್ ಹಮೀದ್ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಸೆಕ್ಷನ್ 305, ಎಸ್.ಸಿ-ಎಸ್.ಟಿ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.