ತುಮಕೂರು: ಬಿಸಿಎಂ ವಸತಿ ಶಾಲೆಯ ಮಕ್ಕಳು ಹರಿದಿರುವ ಸಮವಸ್ತ್ರ ಹಾಕಿರುವುದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ಕುಣಿಗಲ್ ಪಟ್ಟಣದಲ್ಲಿರುವ ಬಿಸಿಎಂ ವಸತಿ ಶಾಲೆಗೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿ, ಶಾಲೆಯಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಯೋರ್ವ ಹರಿದ ಬಟ್ಟೆ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು, ಮಕ್ಕಳಿಗೆ ಹರಿದ ಬಟ್ಟೆ ಯಾಕೆ ನೀಡಿದ್ದೀರಿ ಅಂತ ಶಾಲಾ ಉಸ್ತುವಾರಿಯನ್ನು ಪ್ರಶ್ನೆ ಮಾಡಿದ್ದಾರೆ.
ಇಲಾಖೆಯಿಂದ ಸಮವಸ್ತ್ರ ಸರಬರಾಜಾಗಿಲ್ಲದ ಕಾರಣ ಹರಿದ ಬಟ್ಟೆ ಹಾಕಿದ್ದಾನೆ ಎಂದು ಸಮಜಾಯಿಷಿ ನೀಡಿದರು. ಕೂಡಲೇ ಸಮವಸ್ತ್ರ ಖರೀದಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಹೇಳಿದರು. ಇದೇ ವೇಳೆ ಶಾಲೆಯಲ್ಲಿ ಗ್ರಂಥಾಲಯ ಹಾಗೂ ಕಂಪ್ಯೂಟರ್ ಇಲ್ಲದಿದ್ದಕ್ಕೆ ಕೂಡ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಲಾಖೆಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಚಿವರಿಗೆ ಶಾಸಕ ಡಾ. ರಂಗನಾಥ್ ಸಾಥ್ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv