ಬೆಳಗಾವಿ: ಸಚಿವ ಜಮೀರ್ ಅಹಮದ್ (Zameer Ahmed Khan) ಸದನಕ್ಕೆ ಬಾರದ ವಿಚಾರವಾಗಿ ವಿಧಾನ ಪರಿಷತ್ನಲ್ಲಿ ಇಂದು ವಿಪಕ್ಷ, ಆಡಳಿತ ಪಕ್ಷಗಳ ನಡುವೆ ದೊಡ್ಡ ಗಲಾಟೆ ನಡೆದಿದೆ.
ಪ್ರಶ್ನೋತ್ತರ ಅವಧಿ ವೇಳೆ ಜಮೀರ್ ಅಹಮದ್ ಇಲಾಖೆ ಪ್ರಶ್ನೆಗೆ ಬೇರೊಬ್ಬರು ಉತ್ತರ ಕೊಡುತ್ತಿದ್ದರು. ಇದಕ್ಕೆ ಸಭಾಪತಿ ಹೊರಟ್ಟಿ, ಜಮೀರ್ಗೆ ಸದನಕ್ಕೆ ಬಂದು ಮುಖ ತೋರಿಸೋಕೆ ಹೇಳಿ ಅಂತ ಸಭಾ ನಾಯಕರಿಗೆ ಸೂಚನೆ ಕೊಟ್ಟರು.
ಈ ವೇಳೆ ಎದ್ದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಮೀರ್ಗೆ ಪೀಠದ ಮೇಲೆ ನಂಬಿಕೆ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿ ಸದನಕ್ಕೆ ಗೈರಾಗಿದ್ದಾರೆ ಎಂದು ಕಿಡಿಕಾರಿದರು. ಈ ವೇಳೆ ಸಚಿವರು ಪತ್ರ ಬರೆದು ಅನುಮತಿ ಪಡೆದಿದ್ದಾರೆ ಎಂದು ಸಭಾಪತಿ ಹೇಳಿದರು.
ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು. ಪೂಜಾರಿ ಮಾತು ಮುಂದುವರಿಸಿ, ಜಮೀರ್ ಪೀಠಕ್ಕೆ ಧರ್ಮದ ಲೇಪ ಹಚ್ಚಿದ್ದಾರೆ. ಏನ್ ಬೇಕಾದ್ರು ಮಾತಾಡಬಹುದು ಅಂತ ಅವರು ಮಾತಾಡೋದು ಸರಿಯಲ್ಲ. ಪೀಠಕ್ಕೆ ಧರ್ಮದ ಲೇಪನ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ
ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮಲ್ಕಾಪುರೆ ಮಾತಾಡಿ, ಸದನಕ್ಕೆ ತನ್ನದೇ ಆದ ನಿಯಮ ಇದೆ. ಸಚಿವರು ಯಾಕೆ ಗೈರಾಗಿದ್ದಾರೆ ಹೇಳಬೇಕು, ಸೂಕ್ತ ಕಾರಣ ಬೇಕು. ಜಮೀರ್ ಉದ್ದೇಶ ಪೂರ್ವಕವಾಗಿ ಗೈರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಮೀರ್ ಪತ್ರ ಓದುವಂತೆ ವಿಪಕ್ಷ ಹಠ ಹಿಡಿಯಿತು. ಈ ವೇಳೆ ಎದ್ದ ಸಚಿವ ಕೃಷ್ಣ ಭೈರೇಗೌಡ ರೂಲ್ ಬುಕ್ ಓದಿ, ಸಾಮಾನ್ಯವಾಗಿ ಸಚಿವರು ಗೈರು ಹಾಜರಾಗಲು ಅನುಮತಿ ಬೇಕಿಲ್ಲ. It is not required. ನಿಯಮಗಳ ಪ್ರಕಾರ ಹೇಳುವ ಅವಶ್ಯಕತೆ ನನಗೂ ಇರಲಿಲ್ಲ. ವಿಷಯ ತಿಳಿದುಕೊಂಡು ಮಾತಾಡಲಿ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.
ಸಭಾಪತಿ ಮಾತನಾಡಿ, ಸಭಾಪತಿ ಅನುಮತಿ ಪಡೆದುಕೊಳ್ಳಬೇಕು, ಜಮೀರ್ ಪಡೆದುಕೊಂಡಿದ್ದಾರೆ. ಅವರ ಕಾರಣಗಳು ನನಗೆ ಸಂಬಂಧ ಇಲ್ಲ ಎಂದರು. ಇದಕ್ಕೆ ಪೂಜಾರಿ, ಪೀಠ ಯಾವತ್ತೂ ನಮ್ಮ ರಕ್ಷಣೆಗೆ ಬರಬೇಕು. ಕ್ಯಾಬಿನೆಟ್ ದರ್ಜೆಯ ಮಂತ್ರಿ ಪೀಠಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ನೀಡಬೇಕು ಎಂದರು. ಇದಕ್ಕೆ ಸಭಾಪತಿ ಒಪ್ಪಿದರು. ಇದನ್ನೂ ಓದಿ: ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ 2,000 ರೂ. ಪರಿಹಾರ ನೀಡಲಾಗಿದೆ: ಕೃಷ್ಣಭೈರೇಗೌಡ
ಬಿಜೆಪಿ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಸಚಿವರು ಗೈರು ಹಾಜರಾಗಬಹುದು. ಆದರೆ ಅನುಮಾನದ ಪ್ರಶ್ನೆ ಅಂದರೆ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ ಅಬ್ಸೆಂಟ್ ಆದರೆ ನಾವು ಪ್ರಶ್ನೆಯೇ ಕೇಳಲ್ಲ. ಜಮೀರ್ ಆಗಿರೋದಕ್ಕೆ ಅನುಮಾನ ಅಂದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಣ್ಣ ವಿಚಾರಕ್ಕೆ ಚಂಡಿ ಹಿಡಿಯೋದು ಬೇಡ. ಸ್ವಾತಂತ್ರ್ಯ ಬಂದಾಗಿನಿಂದ ಅನೇಕ ಜನ ಸಚಿವರು ಸದನಕ್ಕೆ ಬಂದಿರಲಿಲ್ಲ. ಸಣ್ಣ ವಿಚಾರ ಯಾಕೆ ದೊಡ್ಡು ಮಾಡ್ತೀರಾ. ಪ್ರಧಾನಿ ಅವರೇ ಸದನಕ್ಕೆ ಬರಲ್ಲ ಅಂತ ಬಿಜೆಪಿ ಸದಸ್ಯರ ಕಾಲೆಳೆದರು. ಬಳಿಕ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪ್ರಶ್ನೋತ್ತರ ಕಲಾಪ ಶುರು ಮಾಡಿದರು.